ಕರ್ನಾಟಕ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರೆಂಟಿ ಯೋಜನೆಗಳು ಅನುಷ್ಟಾನಕ್ಕೆ ಬಂದಾಗಿನಿಂದಲೂ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲಾ ಒಂದು ರೀತಿಯಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ಅದರಲ್ಲೂ ಶಕ್ತಿ ಯೋಜನೆಯ ಕುರಿತು ಸಾಕಷ್ಟು ಅಪಪ್ರಚಾರ ಮಾಡಲಾಗುತ್ತಿದೆ. ಮಹಿಳೆಯರು ಮನೆಯಲ್ಲಿ ಕೆಲಸ ಮಾಡುವುದು ಬಿಟ್ಟು ಪ್ರವಾಸ ಮಾಡುತ್ತಿದ್ದಾರೆ, ಮಹಿಳೆಯರು ಬಸ್ಸಿನ ಸೀಟಿಗಾಗಿ ಹೊಡೆದಾಡಿಕೊಳ್ಳುತ್ತಿದ್ದಾರೆ ಮತ್ತು ಮಹಿಳೆಯರಿಂದ ಪುರುಷರು ಬಸ್ಗಳಲ್ಲಿ ಓಡಾಡದಂತಾಗಿದೆ ಎಂದು ವಿಡಿಯೋಗಳನ್ನು ಹಂಚಿಕೊಳ್ಳಲಾಗುತ್ತಿದೆ.
ಈಗ, “ಇದು ಯಾವ ರೀತಿ ಉಚಿತ ಭಾಗ್ಯ. ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ದರವನ್ನು 90 ರೂಪಾಯಿ ಹೆಚ್ಚಿಸಲಾಗಿದೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ದಾವಣಗೆರೆಯಿಂದ ಬೆಂಗಳೂರಿಗೆ ಬಸ್ ಪ್ರಯಾಣ ದರ ರೂ 280 ಇತ್ತು ಈಗ 371 ಮಾಡಿದ್ದಾರೆ. ಮಹಿಳೆಯರಿಗೆ ಉಚಿತ ಪ್ರಯಾಣ ನೀಡಿ ಪುರುಷರಿಗೆ ರೂ 371 ನಿಗದಿ ಮಾಡಿದ್ದಾರೆ. ಗಂಡಸರಿಂದ ಕಿತ್ತುಕೊಂಡು ಹೆಣ್ಣು ಮಕ್ಕಳಿಗೆ ಫ್ರೀ ಕೊಟ್ಟಿದೆ.” ಎಂದು ಪ್ರತಿಪಾಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಫ್ಯಾಕ್ಟ್ಚೆಕ್: KSRTCಯ ಸಾಮಾನ್ಯ ಬಸ್ಗಳಲ್ಲಿ ದಾವಣಗೆರೆಯಿಂದ ಬೆಂಗಳೂರಿಗೆ ಪ್ರಯಾಣ ದರ ರೂ 319, ಆದರೆ ವಿಶೇಷ ಸಂದರ್ಭಗಳಲ್ಲಿ ಹೆಚ್ಚುವರಿ ಮತ್ತು ತಡೆ ರಹಿತ ಬಸ್ಗಳಲ್ಲಿ ಪ್ರಯಾಣಿಸುವಾಗ ರೂ 371 ಪಾವತಿಸಬೇಕಾಗುತ್ತದೆ. ಇದು ಹಲವು ವರ್ಷಗಳಿಂದಲೂ ಜಾರಿಯಲ್ಲಿದ್ದು ವಿಶೇಷ ತಡೆರಹಿತ ಬಸ್ಗಳಿಗೆ ನಿಯಮಾವಳಿಗಳನ್ವಯ ಶೇ.20 ರಷ್ಟು ಪ್ರಯಾಣ ದರ ಯಾವಾಗಲೂ ಹೆಚ್ಚಿರುತ್ತದೆ. ಇದೇನು ಹೊಸದಾಗಿ ಜಾರಿಗೆ ತಂದಿರುವುದಲ್ಲ, ಎಲ್ಲಾ ನಿಗಮಗಳಲ್ಲಿಯೂ ಈ ನಿಯಮ ಜಾರಿಯಲ್ಲಿದೆ, ಕಾಂಗ್ರೆಸ್ ಸರ್ಕಾರ ಹೀಗೆ ಮಾಡಿದೆ ಎಂಬುದು ಸುಳ್ಳು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಹರಿಹರ ಘಟಕದ ಡಿಪೋ ಮ್ಯಾನೇಜರ್ ತಿಳಿಸಿದ್ದಾರೆ.
ನೀವಿಲ್ಲಿ ನೆನ್ನೆ ಅಂದರೆ 31 ಮಾರ್ಚ್ 2024ರಲ್ಲಿ ದಾವಣಗೆರೆಯಿಂದ- ಬೆಂಗಳೂರಿಗೆ ಪ್ರಯಾಣಿಸಿದ ಪ್ರಯಾಣಿಕರ ಬಸ್ ಟಿಕೆಟ್ ದರ 319 ರೂ. ಎಂದಿರುವುದನ್ನು ನೋಡಬಹುದು.
ಇದೇ ರೀತಿ, ಶಕ್ತಿ ಯೋಜನೆ ಜಾರಿಗೆ ಬಂದ ಹೊಸದರಲ್ಲಿ ಬೆಂಗಳೂರು- ಮೈಸೂರು ನಡುವೆ ಬಸ್ ಪ್ರಯಾಣ ದರವನ್ನು ಹೆಚ್ಚಿಸಲಾಗಿದೆ ಎಂದು ಸಹ ಆರೋಪಿಸಿ ಸುಳ್ಳು ಸಂದೇಶವೊಂದನ್ನು ಹಂಚಿಕೊಳ್ಳಲಾಗಿತ್ತು.
ಆದ್ದರಿಂದ ಕಾಂಗ್ರೆಸ್ ಸರ್ಕಾರ ಮಹಿಳೆಯರಿಗೆ ಫ್ರಿ ನೀಡಲು ಪುರುಷರ ಬಸ್ ದರ ಹೆಚ್ಚಿಸಿದೆ ಎಂಬುದು ಸುಳ್ಳು ಪ್ರತಿಪಾದನೆಯಾಗಿದೆ.
ಇದನ್ನು ಓದಿ: Fact Check: ತೆಲಂಗಾಣದಲ್ಲಿ ಮುಸ್ಲಿಮರು ಹನುಮಂತನ ವಿಗ್ರಹವನ್ನು ಧ್ವಂಸಗೊಳಿಸಿದ್ದಾರೆ ಎಂಬುದು ಸುಳ್ಳು
ವಿಡಿಯೋ ನೋಡಿ: ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆ ಎಂಬುದು ಸುಳ್ಳು
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ