ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ, ತಮ್ಮ ಜನಪರ ಕೆಲಸಗಳ ಮೂಲಕ ನಡೆದಾಡುವ ದೇವರೆಂದು ಪ್ರಸಿದ್ಧರಾಗಿದ್ದ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾ ಸ್ವಾಮೀಜಿ ಅವರ ವಿಧಾನಸೌಧದೊಳಗಿದ್ದ ಫೋಟೋಗಳನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊರಗೆ ಹಾಕಿದೆ. ಈ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರು ದಿವಂಗತ ಶಿವಕುಮಾರ ಸ್ವಾಮೀಜಿಯವರಿಗೆ ಅವಮಾನ ಮಾಡಿದ್ದಾರೆ ಎಂದು ಪ್ರತಿಪಾದಿಸಿದ ವಿಡಿಯೋ ಒಂದು ಹರಿದಾಡುತ್ತಿದೆ.
ಈ ವಿಡಿಯೋವನ್ನು ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿತ ರಾಷ್ಟ್ರಧರ್ಮ ಎಂಬ ಪುಟವೊಂದು ಹಂಚಿಕೊಂಡಿದ್ದು, ವಿಡಿಯೋದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಟೀಕಿಸಿದ್ದು “ನಡೆದಾಡುವ ದೇವರನೇ ವಿಧಾನಸೌಧದಿಂದ ಹೊರಹಾಕಿದ ಕಾಂಗ್ರೆಸ್!” ಎಂಬ ಶೀರ್ಷಿಕೆಯೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ.
ಈ ವಿಡಿಯೋವನ್ನು ಸತ್ಯಶೋಧನೆ ನಡೆಸುವಂತೆ ಓದುಗರು ಮನವಿ ಮಾಡಿದ್ದಾರೆ. ಇದೇ ವೈರಲ್ ವಿಡಿಯೋವನ್ನು ಅನೇಕರು ಹಂಚಿಕೊಂಡಿರುವುದು ಕಾಣಬಹುದು ಇಲ್ಲಿ ಕಾಣಬಹುದು. ಸುವರ್ಣ ನ್ಯೂಸ್ ಸಹ ವಿಧಾನಸೌಧದ ಸಿಬ್ಬಂದಿಗಳಿಂದ ಘಟನೆಯ ಮಾಹಿತಿ ಪಡೆಯದೆ ಲೇಖನವೊಂದನ್ನು ಪ್ರಕಟಿಸಿ “ನಡೆದಾಡುವ ದೇವರನ್ನೇ ವಿಧಾನಸೌಧದಿಂದ ಹೊರಹಾಕಿದ ಕಾಂಗ್ರೆಸ್! ಕೇಸರಿ ಮೇಲಿನ ದ್ವೇಷವೆಂದ ಬಿಜೆಪಿ” ಎಂದು ಬಿಜೆಪಿಯ ಆರೋಪವನ್ನಷ್ಟೇ ವರದಿ ಮಾಡಿತ್ತು.
ಫ್ಯಾಕ್ಟ್ ಚೆಕ್:
ಇದು ಒಂದು ವರ್ಷದ ಹಳೆಯ ಘಟನೆಯಾಗಿದ್ದು, ವಿಧಾನಸೌಧದ ಮೂರನೇ ಮಹಡಿಯಲ್ಲಿ ಕೆ.ಎಚ್ ಮುನಿಯಪ್ಪ ಮತ್ತು ಕೆ. ಎನ್ ರಾಜಣ್ಣ ಅವರ ಕೊಠಡಿಯಿಂದ ಮಾಜಿ ಮಖ್ಯಮಂತ್ರಿಗಳು ಹಾಗೂ ಶಿವಕುಮಾರ್ ಸ್ವಾಮೀಜಿಯವರ ಪೋಟೋವನ್ನು ಹೊರಗೆ ಹಾಕಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು. ಆದರೆ ನೂತನ ಸಚಿವ ಸಂಪುಟ ರಚನೆಯಾದ ಹಿನ್ನಲೆಯಲ್ಲಿ ವಿಧಾನಸೌಧದ ಕೊಠಡಿಗಳನ್ನು ಸ್ವಚ್ಚಗೊಳಿಸುವ ವೇಳೆ ಈ ಪೋಟೋಗಳನ್ನು ಹೊರಗಿಡಲಾಗಿತ್ತು, ನಂತರ ಗೋಡೆಗಳಿಗೆ ಲಗತ್ತಿಸಲಾಗಿದೆ ಎಂದು ವಿಧಾನಸೌಧದ ಸಚಿವರ ಕಛೇರಿಯ ಮೂಲಗಳು ಪ್ರಜಾವಾಣಿಗೆ ಸ್ಪಷ್ಟನೆ ನೀಡಿವೆ.
ಈ ಕುರಿತು ಸಚಿವ ಕೆ.ಎಚ್ ಮುನಿಯಪ್ಪ ಮತ್ತು ಕೆ. ಎನ್ ರಾಜಣ್ಣ ಸ್ಪಷ್ಟನೆ ನೀಡಿರುವ ಕುರಿತ ವರದಿಗಳು ಹುಡುಕಾಟದಲ್ಲಿ ಲಭ್ಯವಾಗಿಲ್ಲ. ಅಂತಹ ವರದಿ ಸಿಕ್ಕೊಡನೆ ಲೇಖನದಲ್ಲಿ ಸೇರಿಸಲಾಗುವುದು.
ಒಟ್ಟಾರೆಯಾಗಿ, ಒಂದು ವರ್ಷದ ಹಳೆಯ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಇತ್ತೀಚೆಗೆ ನಡೆದಿರುವ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ: ಮುಸ್ಲಿಂ ಯುವಕರನ್ನು ಯುಪಿ ಪೊಲೀಸರು ಥಳಿಸಿದ ಹಳೆಯ ವಿಡಿಯೋ ಹಸುವಿನ ಬಾಲ ಕತ್ತರಿಸಿದ್ದಕ್ಕೆ ಎಂದು ತಪ್ಪಾಗಿ ಹಂಚಿಕೆ