Fact Check | ಸಂಜಯ್ ರಾವತ್ ಉದ್ಧವ್ ಠಾಕ್ರೆ ಅವರನ್ನು ‘ಮುಸ್ಲಿಂ ಹೃದಯ ಸಾಮ್ರಾಟ್’ ಎಂದು ಕರೆದಿದ್ದಾರೆ ಎಂಬುದು ಸುಳ್ಳು

ಮಹಾರಾಷ್ಟ್ರದ ವಿಧಾನಸಭೆ ಚುನಾವಣೆ ಹತ್ತಿರ ಬರುತ್ತಿದಂತೆ, ಅಲ್ಲಿಗೆ ಸಂಬಂಧಿಸಿದಂತೆ ಹಲವು ರೀತಿ ಕೋಮು ಆಯಾಮದ ಸುದ್ದಿಗಳು ಅಂತರ್ಜಾಲದಲ್ಲಿ ಹೆಚ್ಚು ಸದ್ದು ಮಾಡುತ್ತಿದೆ. ಅದರಲ್ಲಿ ಬಹುತೇಖ ಸುಳ್ಳು ಸುದ್ದಿಗಳೇ ಹೆಚ್ಚಾಗಿದೆ. ಹೀಗಾಗಿ ಹಲವು ಅಲ್ಲಿನ ಹಲವು ಸುದ್ದಿಗಳು ಅನುಮಾನ ಹುಟ್ಟಿಸುತ್ತವೆ. ಇದೀಗ ಅಂತಹದ್ದೆ ಸುದ್ದಿಯೊಂದು ವೈರಲ್‌ ಆಗಿದೆ. ಅದರಲ್ಲಿಯೂ ಪ್ರಮುಖವಾಗಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆಗೆ ಸಂಬಂಧಿಸಿದ ಸುದ್ದಿಯೊಂದು ಹೆಚ್ಚು ಸದ್ದು ಮಾಡುತ್ತಿದೆ. ಮರಾಠಿಯ ಲೋಕ್‌ಮತ್‌ ಪತ್ರಿಕೆಯಲ್ಲಿ ಉದ್ದವ್‌ ಠಾಕ್ರೆ ಬಣದ ಶಿವಸೇನೆಯ ನಾಯಕ ಸಂಜಯ್‌ ರಾವತ್‌ ಅವರು “”ಜನರು ಉದ್ಧವ್ ಠಾಕ್ರೆ ಅವರನ್ನು ಮುಸ್ಲಿಂ ಹೃದಯಗಳ ಚಕ್ರವರ್ತಿ ಎಂದು ಕರೆದರೆ, ಅದರಲ್ಲಿ ತಪ್ಪೇನು? ಹಿಂದೂ ಹೃದಯಗಳ ಚಕ್ರವರ್ತಿಯ ಮಗ ಮತ್ತೊಂದು ಧರ್ಮದ ರಾಜನಾಗಬಹುದು.” ಎಂದು ಸಂಜಯ್‌ ರಾವತ್‌ ಅವರು ಹೇಳಿದ್ದಾರೆ ಎಂದು ಫೋಟೋದೊಂದಿಗೆ ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ.

ವೈರಲ್‌ ಫೋಟೋದಲ್ಲಿ ಲೋಕ್‌ಮತ್‌ ಪತ್ರಿಕೆಯಲ್ಲಿ ಪ್ರಕಟಗೊಂಡ ಹೇಳಿಕೆಯಂತೆಯೇ ಇರುವ ಗ್ರಾಫಿಕ್ಸ್‌ ಇದ್ದು, ಇದು ಸಂಜಯ್‌ ರಾವತ್‌ ಅವರ ಹೇಳಿಕೆಯಂತೆಯೇ ಕಂಡು ಬಂದಿದೆ. ಹೀಗಾಗಿ ಹಲವರು ವೈರಲ್‌ ಪೋಸ್ಟ್‌ ಅನ್ನು ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಇದು ಮಹಾರಾಷ್ಟ್ರದ ಸಾರ್ವಜನಿಕರಲ್ಲಿ ಗೊಂದಲವನ್ನು ಉಂಟುಮಾಡಿದ್ದು, ಅಲ್ಲಿನ ಸಾರ್ವಜನಿಕರಲ್ಲಿ ಉದ್ಧವ್‌ ಠಾಕ್ರೆ ಬಣದ ಶಿವಸೇನೆಯ ಬಗ್ಗೆ ಕೋಮು ಆಯಾಮದ ಅಭಿಪ್ರಾಯವನ್ನು ಸೃಷ್ಟಿಸಲು ಯತ್ನಿಸಲಾಗುತ್ತಿದೆ. ಹೀಗೆ ವಿವಿಧ ಕೋನದಿಂದ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿಕೊಂಡು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಬಳಿಕ ವೈರಲ್‌ ಫೋಟೋವಿನ ಕೀ ಫ್ರೇಮ್‌ ಅನ್ನು ಬಳಸಿಕೊಂಡು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ 30 ಸೆಪ್ಟೆಂಬರ್‌ 2024ರಂದು ಲೋಕ್‌ಮತ್‌ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್ಟ್‌ವೊಂದು ಕಂಡು ಬಂದಿದ್ದು, ಅದರಲ್ಲಿ ಶಿಂಧೆ ಬಣದ ದಸರಾ ಕೂಟವನ್ನು ರಾವತ್‌ ಅವರು ಟೀಕಿಸಿದ್ದಾರೆ ಎಂದು ಉಲ್ಲೇಖವಾಗಿರುವುದು ಕಂಡು ಬಂದಿದೆ.

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಲು ನಾವು ಲೋಕ್‌ಮತ್‌ನ ಎಕ್ಸ್‌ ( ಹಿಂದಿನ ಟ್ವಿಟರ್‌) ಅನ್ನು ಪರಿಶೀಲಿಸಿದೆವು, ಈ ವೇಳೆ ನಮಗೆ ರಾವುತ್ ಅವರ ಉಲ್ಲೇಖದೊಂದಿಗೆ ವೈರಲ್ ಗ್ರಾಫಿಕ್ ನಕಲಿಯಾಗಿದೆ ಮತ್ತು ಮರಾಠಿ ಸುದ್ದಿ ಔಟ್ಲೆಟ್‌ನಿಂದಲೂ ಈ ಪೋಸ್ಟ್ ಮಾಡಲಾಗಿಲ್ಲ ಎಂದು ಲೋಕ್‌ಮತ್‌ ಸ್ಪಷ್ಟನೆ ನೀಡಿರುವುದು ಕಂಡು ಬಂದಿದೆ. ಇನ್ನೂ ಮುಂದುವರೆದು ಈ ಪೋಸ್ಟ್‌ನಲ್ಲಿ ” ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಪಕ್ಷದ ನಾಯಕರಾದ ಆದಿತ್ಯ ಠಾಕ್ರೆ ಮತ್ತು ಸಂಜಯ್ ರಾವತ್ ಅವರ ಬಗ್ಗೆ ತಪ್ಪುದಾರಿಗೆಳೆಯುವ ಗ್ರಾಫಿಕ್ ‘ಲೋಕಮತ್’ ಹೆಸರಿನಲ್ಲಿ ವೈರಲ್ ಆಗಿದೆ. ಆದಾಗ್ಯೂ, ಅಂತಹ ಯಾವುದೇ ಗ್ರಾಫಿಕ್ ಅನ್ನು ‘ಲೋಕಮತ್’ ರಚಿಸಿಲ್ಲ, ಇದು ‘ಲೋಕಮತ್’ ನ ಹೆಸರು ಮತ್ತು ಲೋಗೋವನ್ನು ಬಳಸಿಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಒಂದು ನಿರ್ದಿಷ್ಟ ಸಿದ್ಧಾಂತದ ಬೆಂಬಲಿಗರಿಂದ ನಡೆಸಲಾದ ವಂಚನೆಯಾಗಿದೆ.” ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಉದ್ಧವ್‌ ಠಾಕ್ರೆ ಬಣದ ಶಿವಸೇನೆ ಪಕ್ಷದ ನಾಯಕ ಸಂಜಯ್‌ ರಾವತ್‌ ಅವರು ಉದ್ಧವ್‌ ಠಾಕ್ರೆ ಅವರನ್ನು ಮುಸ್ಲಿಂ ಹೃದಯ ಸಾಮ್ರಾಟ ಎಂದು ಕರೆದಿದ್ದಾರೆ ಎಂಬುದು ಸುಳ್ಳು. ಈ ಕುರಿತು ಲೋಕ್‌ಮತ್‌ ಪತ್ರಿಕೆ ಯಾವುದೇ ವರದಿಯನ್ನು ಮಾಡಿಲ್ಲ. ಲೋಕ್‌ಮತ್‌ ಪತ್ರಿಕೆಯ ಗಾಫಿಕ್‌ ಟೆಂಪ್ಲೆಟ್‌ ಬಳಸಿಕೊಂಡು ಕಿಡಿಗೇಡಿಗಳು ಸುಳ್ಳು ಸುದ್ದಿಯನ್ನು ಹರಡಿದ್ದಾರೆ. ಈ ಕುರಿತು ಪತ್ರಿಕೆ ಕೂಡ ಸ್ಪಷ್ಟನೆಯನ್ನು ನೀಡಿದೆ. ಹಾಗಾಗಿ ಯಾರೂ ಕೂಡ ಈ ವೈರಲ್‌ ಪೋಸ್ಟ್‌ ಅನ್ನು ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಯನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check : ಗಂಗಾಸ್ನಾನ ಮಾಡುವಾಗ ದಲಿತ ಯುವಕರ ಮೇಲೆ ಹಲ್ಲೆ ಎಂದು ತಪ್ಪಾಗಿ ಮಧ್ಯಪ್ರದೇಶದ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *