Fact Check | ರಾಜಸ್ತಾನದಲ್ಲಿ RSS ಕಾರ್ಯಕರ್ತನ ಮೇಲೆ ಮುಸ್ಲಿಮರಿಂದ ಹಲ್ಲೆ ಎಂಬುದು ಸುಳ್ಳು

“ಅಕ್ಟೋಬರ್ 17 ರಂದು ರಾಜಸ್ತಾನದ ಜೈಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತನೊಬ್ಬ ಅನ್ಯಕೋಮಿನ ಪುರುಷರ ಗುಂಪು ನಡೆಸಿದ ದಾಳಿಗೆ ತೀವ್ರವಾಗಿ ಗಾಯಗೊಂಡಿದ್ದಾನೆ. ಈ ದಾಳಿಯ ಉದ್ದೇಶ ಬಹಳ ಸ್ಪಷ್ಟ ಮುಸ್ಲಿಂ ಬಾಹುಲ್ಯವುಳ್ಳ ಪ್ರದೇಶದಲ್ಲಿ ಹಿಂದೂಗಳು ಯಾವುದೇ ಕಾರ್ಯಕ್ರಮವನ್ನು ನಡೆಸಬಾರದು,  ಅಷ್ಟಕ್ಕೂ ಆ ದಿನ ಶರದ್ ಪೂರ್ಣಿಮೆಯ ಆಚರಣೆಯಲ್ಲಿ ಪ್ರಸಾದವಾಗಿ ಖೀರ್ ವಿತರಿಸುತ್ತಿದ್ದಾಗ ದಾಳಿಕೋರರಲ್ಲಿ ಒಬ್ಬನಾದ ನಸೀಬ್ ದೇವಾಲಯವನ್ನು ಪ್ರವೇಶಿಸಿದ್ದಾನೆ ಇವನ ಜೊತೆ ಬಂದ ಅವನ ಕೋಮಿನ ಪುರುಷರು ದಾಳಿ ನಡೆಸಿದ್ದಾರೆ” ಎಂದು ಪೋಸ್ಟ್‌ ಅನ್ನು ಹಂಚಿಕೊಳ್ಳಲಾಗುತ್ತಿದೆ.

ಇನ್ನೂ ಇದೇ ರೀತಿಯ ವರದಿಯನ್ನು ಕೋಮು ಬೆಂಕಿ ಹಚ್ಚುವ ಸುದರ್ಶನ್‌ ಟಿವಿ ಕೂಡ ವರದಿ ಮಾಡಿರುವುದರಿಂದ, ಸಾಕಷ್ಟು ಮಂದಿ ಇದು ನಿಜವೆಂದು ಭಾವಿಸಿ ತಮ್ಮ ವೈಯಕ್ತಿಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಮುಸ್ಲಿಂ ಸಮುದಾಯದ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂತೆ ಮಾಡಿದೆ. ಹೀಗಾಗಿ ವೈರಲ್‌ ಪೋಸ್ಟ್‌ ಕೋಮು ಸಾಮಾರಸ್ಯಕ್ಕೆ ಕೂಡ ಧಕ್ಕೆ ಉಂಟು ಮಾಡುತ್ತಿದೆ. ಹೀಗಾಗಿ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌ 

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ಪೋಸ್ಟ್‌ ಕುರಿತು ಪರಿಶೀಲನೆ ನಡೆಸಲು ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ 20 ಅಕ್ಟೋಬರ್‌ 2024ರಲ್ಲಿ ರಾಜಸ್ತಾನ ಮೂಲದ ಹಿಂದಿ ಸುದ್ದಿ ಸಂಸ್ಥೆ ಪತ್ರಿಕಾ ಪ್ರಕಟಿಸಿದ ವರದಿಯೊಂದು ಕಂಡು ಬಂದಿದೆ. ಇದರಲ್ಲಿ “ಆರ್‌ಎಸ್‌ಎಸ್ ಕಾರ್ಯಕ್ರಮದಲ್ಲಿ ಚಾಕು ದಾಳಿ ನಡೆಸಿದ ಆರೋಪಿ ನಸೀಬ್ ಮನೆ ಮೇಲೆ ಬುಲ್ಡೋಜರ್ ದಾಳಿ, ಜೆಡಿಎ ಕ್ರಮ ಕೈಗೊಂಡಿದೆ.” ಎಂದು ಹಿಂದಿಯಲ್ಲಿ ಶೀರ್ಷಿಕೆ ನೀಡಿರುವುದನ್ನು ನಾವು ಕಂಡು ಕೊಂಡಿದ್ದೇವೆ.

ಈ ವರದಿಯಲ್ಲಿ ಆರೋಪಿಯ ಹೆಸರು ನಸೀಬ್‌ ಎಂದಿದ್ದು ಹಲವರು ಆರೋಪಿಯನ್ನು ಮುಸ್ಲಿಂ ಸಮುದಾಯಕ್ಕೆ ಸೇರದವನು ಎಂದುಕೊಂಡಿದ್ದಾರೆ. ಇದೇ ಅಂಶವನ್ನು 18 ಅಕ್ಟೋಬರ್‌ ನಲ್ಲಿ ಎನ್‌ಡಿಟಿವಿ ರಾಜಸ್ತಾನ ಪ್ರಕಟಿಸಿದ ವರದಿಯಲ್ಲಿ ಕೂಡ ಉಲ್ಲೇಖಿಸಲಾಗಿದೆ.  ಹೆಚ್ಚಿನ ಮಾಹಿತಿಗಾಗಿ ಸುದ್ದಿ ಸಂಸ್ಥೆ ಜೈಪುರ ಕಮಿಷನರೇಟ್‌ನ ಸಹಾಯಕ ಪೊಲೀಸ್ ಕಮಿಷನರ್ (ಎಸಿಪಿ) ಕುವಾರ್ ರಾಷ್ಟ್ರದೀಪ್ ಅವರನ್ನು ಸಂಪರ್ಕಿಸಿ ಆರೋಪಿಯ ಬಗ್ಗೆ ವಿಚಾರಿಸಿದಾಗ ಆತ ಹಿಂದೂ ಸಮುದಾಯಕ್ಕೆ ಸೇರಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇನ್ನು ಘಟನೆಗೆ ಸಂಬಂಧಿಸಿದಂತೆ ಡಿಡಿ ರಾಜಸ್ತಾನಕ್ಕೆ ಮಾಹಿತಿ ನೀಡಿರುವ ಎಸಿಪಿ ಶಾಂತಿಯುತವಾಗಿ ನಡೆಯುತ್ತಿದ್ದ ಕಾರ್ಯಕ್ರಮಕ್ಕೆ ನಸೀಬ್‌ ಚೌಧರಿ ಎಂಬ ಆರೋಪಿ ದಾಳಿ ನಡೆಸಿದ್ದಾನೆ. ಈತನ ದಾಳಿಯಿಂದ ಸಾರ್ವಜನಿಕರು ತೊಂದರೆಗೆ ಒಳಪಟ್ಟರು, ನಾವು ಕಾನೂನಾತ್ಮಕವಾಗಿ ಎಲ್ಲಾ ರೀತಿಯ ಕ್ರಮವನ್ನು ತೆಗೆದುಕೊಂಡಿದ್ದೇವೆ ಎಂದು ಮಾಹಿತಿಯನ್ನು ನೀಡಿದರು.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ ಆರ್‌ಎಸ್‌ಎಸ್‌ ಕಾರ್ಯಕರ್ತನ ಮೇಲೆ ಮುಸಲ್ಮಾನರಿಂದ ದಾಳಿ ಎಂಬುದು ಸುಳ್ಳು, ಹಲ್ಲೆ ನಡೆಸಿದವನ ಪೂರ್ತಿ ಹೆಸರು ನಸೀಬ್‌ ಚೌಧರಿ. ಈ ಕುರಿತು ಎನ್‌ಡಿಟಿವಿ ಪೊಲೀಸ್‌ ಕಮೀಷನರ್‌ ಅವರನ್ನು ವಿಚಾರಿಸಿದ್ದು, ದಾಳಿ ನಡೆಸಿದ ಆರೋಪಿ ಹಿಂದೂವೇ ಆಗಿದ್ದಾನೆ ಎಂದು ತಿಳಿದು ಬಂದಿದೆ. ಹಾಗಾಗಿ ವೈರಲ್‌ ಪೋಸ್ಟ್‌ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿ ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.


ಇದನ್ನೂ ಓದಿ : Fact Check: ಡೀಪ್ ಫೇಕ್ ವೀಡಿಯೊಗಳನ್ನು ಕಣ್ಣಿನ ಕಾಯಿಲೆಗಳಿಗೆ ವೈದ್ಯರು ಸೂಚಿಸುವ ಮನೆಮದ್ದುಗಳು ಎಂದು ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *