“ಯುಪಿಯ ಗಾಜಿಯಾಬಾದ್ನಲ್ಲಿರುವ ದಸ್ನಾದೇವಿ ದೇವಸ್ಥಾನದ ಮಹಂತ್ ಯತಿ ನರಸಿಂಹಾನಂದ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅವರ ಈ ಆಕ್ರೋಶಕ್ಕೂ ಕಾರಣವಿದೆ. ಹಿಂದೂ ರಕ್ಷಣಾ ದಳದ ಅಧ್ಯಕ್ಷ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ವಿರುದ್ಧ ಗೂಂಡಾ ಕಾಯ್ದೆ ವಿರುದ್ಧ ಗಾಜಿಯಾಬಾದ್ನ ಡಿಎಂ ಕಚೇರಿಯಲ್ಲಿ ಪ್ರತಿಭಟನೆ ನಡೆಸಲಾಯಿತು. ಇಲ್ಲಿ ಪಿಂಕಿ ಚೌಧರಿ ಅವರನ್ನು ಬೆಂಬಲಿಸಲು ದಸ್ನಾದೇವಿ ದೇವಸ್ಥಾನದಿಂದ ಡಿಎಂ ಕಚೇರಿಗೆ ಹೋಗುತ್ತಿದ್ದ ಮಹಾಮಂಡಲೇಶ್ವರ ಯತಿ ನರಸಿಂಹಾನಂದ ಗಿರಿ ಅವರನ್ನು ಪೊಲೀಸರು ತಡೆದಿದ್ದಾರೆ. ಹೀಗಾಗಿಯೇ ಅವರು ಯೋಗಿ ಆದಿತ್ಯನಾಥ್ ಅವರ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿದೆ.
ಈ ವಿಡಿಯೋವನ್ನು ಇತ್ತೀಚೆಗೆ ನಡೆದ ಘಟನೆ ಎಂದು ಹಂಚಿಕೊಳ್ಳಲಾಗುತ್ತಿದೆ. ಹಲವು ಮಂದಿ ಉತ್ತರ ಪ್ರದೇಶದಲ್ಲಿ ಹಿಂದೂಗಳಿಗೆ ರಕ್ಷಣೆ ಇಲ್ಲ ಎಂದು ಕೂಡ ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ಬಿಜೆಪಿಯ ಅಂಗಸಂಸ್ಥೆಗಳೇ ಈಗ ಯೋಗಿ ಆದಿತ್ಯನಾಥ್ ಅವರ ಸರ್ಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿವೆ ಎಂದು ಬರೆದುಕೊಂಡಿದ್ದಾರೆ. ಹೀಗಾಗಿ ಉತ್ತರ ಪ್ರದೇಶದ ರಾಜಕೀಯದ ಬಗ್ಗೆ ಹಲವು ರೀತಿಯಾದ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಆರಂಭವಾಗಿದೆ. ಹೀಗೆ ವಿವಿಧ ಆಯಾಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಪರಿಶೀಲನೆ ನಡೆಸೋಣ
ಫ್ಯಾಕ್ಟ್ಚೆಕ್
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ನಮಗೆ ಎಬಿಪಿ ನ್ಯೂಸ್ನ ಯೂಟ್ಯೂಬ್ ಚಾನೆಲ್ನಲ್ಲಿ 11 ಅಕ್ಟೋಬರ್ 2023ರಂದು ಅಪ್ಲೋಡ್ ಮಾಡಲಾದ ವಿಡಿಯೋವೊಂದು ಕಂಡು ಬಂದಿದೆ. ಈ ವಿಡಿಯೋದಲ್ಲಿ ವೈರಲ್ ವಿಡಿಯೋದಲ್ಲಿ ಹೇಳಿದಂತೆ ಯೇತಿ ನರಸಿಂಹಾನಂದರು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಟೀಕಿಸಿರುವುದು ನಿಜ ಆದರೆ ಅದು ಇತ್ತೀಚೆಗೆ ಎಂಬುದು ಸುಳ್ಳು.
ಇದನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳಲು ನಾವು ಇನ್ನಷ್ಟು ಕೀ ವರ್ಡ್ಗಳನ್ನು ಬಳಸಿಕೊಂಡು ಹುಡುಕಾಟವನ್ನು ನಡೆಸಿದೆವು. ಆಗ ಅದೇ 11 ಅಕ್ಟೋಬರ್ 2023ರಂದು ಇದೇ ಮಾಹಿತಿಯೊಂದಿಗೆ IANS ಎಂಬ ಯೂಟ್ಯುಬ್ ಚಾನಲ್ ವಿಡಿಯೋ ಅಪ್ಲೋಡ್ ಆಗಿರುವುದು ಕಂಡು ಬಂದಿದೆ. ಇದರಲ್ಲಿ ಕೂಡ ಎಬಿಪಿ ನ್ಯೂಸ್ನಲ್ಲಿ ಉಲ್ಲೇಖಿಸಿರುವ ಅಂಶಗಳು ಕಂಡು ಬಂದಿದೆ. ಕೇವಲ ಇಷ್ಟು ಮಾತ್ರವಲ್ಲದೆ ಅದೇ ದಿನ ಇಂಡಿಯಾ ಟಿವಿ ಕೂಡ ತನ್ನ ವೆಬ್ತಾಣದಲ್ಲಿ ಇದೇ ಮಾಹಿತಿಯ ವರದಿಯನ್ನು ಪ್ರಕಟಿಸಿರುವುದು ಕೂಡ ಕಂಡು ಬಂದಿದೆ. ಇನ್ನು ಇಲ್ಲಿ ವೈರಲ್ ವಿಡಿಯೋದ ಟಿಪ್ಪಣಿಗಳಲ್ಲಿ ಉಲ್ಲೇಖಿಸಿರುವಂತೆ ಯಾವುದೇ ರಾಜಕೀಯ ಆಯಾಮಗಳ ಕುರಿತ ಮಾಹಿತಿ ಕಂಡು ಬಂದಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಹಿಂದೂ ರಕ್ಷಣಾ ದಳದ ಅಧ್ಯಕ್ಷ ಭೂಪೇಂದ್ರ ತೋಮರ್ ಅಲಿಯಾಸ್ ಪಿಂಕಿ ಚೌಧರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯೋಗಿ ಆದಿತ್ಯನಾಥ್ ವಿರುದ್ಧ ಯೇತಿ ನರಸಿಂಹಾನಂದರು ಟೀಕಿಸಿರುವುದು ನಿಜ. ಆದರೆ ಅದು ಇತ್ತೀಚೆಗೆ ಎಂಬುದು ಸುಳ್ಳು. ಘಟನೆ ಒಂದು ವರ್ಷದ ಹಿಂದೆ ನಡೆದಿದೆ. ಇದನ್ನು ಇತ್ತೀಚಿನದ್ದು ಎಂದು ವಿಡಿಯೋವನ್ನು ಸುಳ್ಳು ನಿರೂಪಣೆಯೊಂದಿಗೆ ಹಂಚಿಕೊಳ್ಳಲಾಗಿದೆ ಎಂಬುದು ಹಲವು ವರದಿಗಳಿಂದ ಸಾಭೀತಾಗಿದೆ. ಹಾಗಾಗಿ ವೈರಲ್ ವಿಡಿಯೋವನ್ನು ಯಾವುದೇ ಕಾರಣಕ್ಕೂ ಹಂಚಿಕೊಳ್ಳಬೇಡಿ. ಸುಳ್ಳು ಸುದ್ದಿಗಳನ್ನು ಹಂಚಿಕೊಳ್ಳುವುದು ಕಾನೂನಿನ ಪ್ರಕಾರ ಅಪರಾಧವಾಗಿದೆ.
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.