Fact Check: ಮುಸ್ಲಿಮರು ಹೆಚ್ಚಿರುವ ಪ್ರದೇಶದಿಂದ ಹಿಂದೂಗಳು ಜಾಗ ಖಾಲಿ ಮಾಡಬೇಕೆಂಬ ಬ್ಯಾನರ್‌ ಹಾಕಿರುವುದು ಉತ್ತರ ಪ್ರದೇಶದಲ್ಲಿ

ಮುಸ್ಲಿಂ

ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ ಎಂಬಂತೆ ಹೇಳಿಕೆಯೊಂದರ ಪೋಸ್ಟರ್‌ ಒಂದು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

Fact Check: ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ಹಿಂದಿನ ಸತ್ಯವೇನು?

“ಭಾರತದ ಉತ್ತರ ಪ್ರದೇಶ, ಬಂಗಾಲ, ಕೇರಳ, ಹೈದರಾಬಾದ, ಆಸ್ಸಾಮ ರಾಜ್ಯಗಳಲ್ಲಿ ನಾವು ಮುಸಲ್ಮಾನರು ಬಹುಸಂಖ್ಯಾಕರಾಗಿದ್ದೇವೆ. ಇಸ್ಲಾಂ ಪ್ರಕಾರ ಮುಸ್ಲಿಂ ಬಾಹುಳ್ಯವಿರುವ ಪ್ರದೇಶಗಳಲ್ಲಿ ಮುಸ್ಲಿಮೇತರರು ವಾಸ ಮಾಡುವುದನ್ನು ಹರಾಮ್ ಎಂದು ಹೇಳಲಾಗಿದೆ. ಆದ್ದರಿಂದ ಹಿಂದೂಗಳು ಈ ಪ್ರದೇಶವನ್ನು ತಕ್ಷಣ ಖಾಲಿ ಮಾಡಬೇಕು. ಇಲ್ಲವಾದರೆ ಕಾಶ್ಮೀರದಲ್ಲಿ ಪಂಡಿತರಿಗೆ ನಾವು ಏನು ಮಾಡಿದೆವೊ ಅದನ್ನು ಇಲ್ಲಿಯೂ ಅನುಸರಿಸುತ್ತೇವೆ.” ಮೌಲಾನಾ ಸೈಯ್ಯದ ಅಹ್ಮದ ಬುಖಾರಿ ಶಾಹಿ ಇಮಾಮ ಜುಮ್ಮಾ ಮಸೀದಿ, ದೆಹಲಿ” ಎಂದು ಫೇಸ್‌ಬುಕ್‌ ನಲ್ಲಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗಿದೆ. ಈ ಹೇಳಿಕೆಯೊಂದಿಗೆ ಪೋಸ್ಟ್ ನಲ್ಲಿ ಬುಖಾರಿ ಅವರ ಚಿತ್ರದೊಂದಿಗೆ ಹಿಂದಿಯಲ್ಲಿ ಬರೆದಿರುವ ಬ್ಯಾನರ್ ಚಿತ್ರವನ್ನು ಲಗತ್ತಿಸಲಾಗಿದೆ.

ಹಾಗಿದರೆ ನಿಜವಾಗಿಯೂ  ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಅವರು ಈ ರೀತಿಯ ಹೇಳಿಕೆ ನೀಡಿದ್ದಾರೆಯೇ? ಮುಸ್ಲಿಮರು ನಿಜವಾಗಿಯೂ ಇಂತಹದೊಂದು ಬ್ಯಾನರ್‌ಅನ್ನು ಪ್ರದರ್ಶಿಸಿದ್ದಾರೆಯೇ? ಎಂದು ಈ ಲೇಖನದ ಮೂಲಕ ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್‌ ಅನ್ನು ನಿಜವಾಗಿಯೂ ಪ್ರದರ್ಶಿಸಲಾಗಿದೆಯೇ ಎಂದು ಪರಿಶೀಲಿಸಲು ನಾವು ಗೂಗಲ್‌ನಲ್ಲಿ ಕೀವರ್ಡ್ ಸಹಾಯದಿಂದ ಸರ್ಚ್ ಮಾಡಿದಾಗ, ವರ್ಲ್ಡ್ ವಿನ್ನರ್ ಟೈಮ್ಸ್ ಎಂಬ ಯೂಟ್ಯೂಬ್ ಚಾನೆಲ್‌ನಲ್ಲಿ ವೈರಲ್ ಬ್ಯಾನರ್ ಗೆ ಸಂಬಂಧಿಸಿದ ವಿಡಿಯೋವೊಂದು ಲಭ್ಯವಾಗಿದೆ.

ವಿಡಿಯೋದಲ್ಲಿ ನೀಡಲಾದ ಮಾಹಿತಿಯ ಪ್ರಕಾರ, ಈ ಬ್ಯಾನರ್ ಗಳನ್ನು ಮೊಹರಂಗೆ ಮೊದಲು ಉತ್ತರಪ್ರದೇಶದ  ಪ್ರತಾಪ್ ಗಢ ಜಿಲ್ಲೆಯಲ್ಲಿ ಹಾಕಲಾಗಿದೆ. ಮಾಹಿತಿ ಬಂದ ಕೂಡಲೇ ಪೊಲೀಸರು ಕ್ರಮ ಕೈಗೊಂಡು ಎಲ್ಲಾ ಹೋರ್ಡಿಂಗ್ ಗಳನ್ನು ತೆಗೆದುಹಾಕಿದರು ಎಂದಿದೆ.

ಮತ್ತಷ್ಟು ಮಾಹಿತಿಗಾಗಿ ಸರ್ಚ್ ಮಾಡಿದಾಗ ಕೆಲವು ವರದಿಗಳು ಲಭ್ಯವಾಗಿದ್ದು, ಈ ವರದಿಗಳ ಪ್ರಕಾರ,  ಪ್ರತಾಪ್ ಗಢ ಶಾಸಕ ರಾಜಾ ಭೈಯಾಗೆ ಸೇರಿದ ಶಾಲೆಯ ಗೋಡೆಯ ಮೇಲೆ ಹೋರ್ಡಿಂಗ್‌ಗಳು ಕಂಡುಬಂದಿವೆ. ಇದನ್ನು ನೋಡಿದ ಸ್ಥಳೀಯರು ಆಕ್ರೋಶಗೊಂಡು ಪೊಲೀಸರಿಗೆ ಕರೆ ಮಾಡಿದ್ದಾರೆ. ನಂತರ ಪೊಲೀಸರು ಈ ಪೋಸ್ಟರ್ ಗಳನ್ನು ತೆರವು ಮಾಡಿಸಿದ್ದಾರೆ ಎಂದು ಲೈವ್ ಹಿಂದೂಸ್ತಾನ್  ಮತ್ತು  ದೈನಿಕ್ ಜಾಗರಣ್  ವರದಿಯನ್ನು ಪ್ರಕಟಿಸಿದ್ದವು.

Fact Check: ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ಜಾಗಖಾಲಿ ಮಾಡಬೇಕು ಎಂಬ ಬ್ಯಾನರ್ ಹಿಂದಿನ ಸತ್ಯವೇನು?

ಮತ್ತಷ್ಟು ಸರ್ಚ್ ಮಾಡಿದಾಗ, ಆಗಸ್ಟ್ 12, 2021 ರಂದು ಪ್ರತಾಪ್ ಗಢ ಪೊಲೀಸರು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ನೀಡಿದ ಹೇಳಿಕೆಯೊಂದು ಲಭ್ಯವಾಗಿದೆ. ಇದರಲ್ಲಿ ಪ್ರತಾಪ್ ಗಢದ ಕುಂಡಾದಲ್ಲಿ ದುಷ್ಕರ್ಮಿಗಳು ಹೋರ್ಡಿಂಗ್ ಗಳನ್ನು ಹಾಕಿದ್ದಾರೆ ಎಂದು ಎಸ್ಪಿ ಹೇಳುವುದನ್ನು ಕೇಳಬಹುದು. ಮಾಹಿತಿ ಬಂದ ತಕ್ಷಣ, ಅದನ್ನು ತೆರವುಗೊಳಿಸಿ ಮತ್ತು ಅಪರಿಚಿ ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದಿದ್ದಾರೆ.

ಪ್ರಕರಣದ ಸತ್ಯಾಸತ್ಯತೆ ತಿಳಿಯಲು ನ್ಯೂಸ್‌ ಚೆಕರ್ ಕುಂದಾ ಪೊಲೀಸರನ್ನು ಸಂಪರ್ಕಿಸಿದೆ. “ಈ ವಿವಾದಾತ್ಮಕ ಹೋರ್ಡಿಂಗ್‌ಗಳನ್ನು ಕುಂದ ಪಟ್ಟಣದಲ್ಲಿರುವ ಟಿಪಿ ಇಂಟರ್ ಕಾಲೇಜಿನ ಗೋಡೆಯ ಮೇಲೆ ಹಾಕಲಾಗಿದೆ, ನಮಗೆ ಮಾಹಿತಿ ಬಂದ ಕೂಡಲೇ ನಾವು ಈ ಪೋಸ್ಟರ್ಗಳನ್ನು ತೆಗೆದುಹಾಕಿದ್ದೇವೆ. ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆಕ್ಷನ್ 153 ಎ ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಮತ್ತು ಅಪರಾಧಿಗಳಿಗಾಗಿ ಶೋಧ ನಡೆಯುತ್ತಿದೆ. ಅವರನ್ನು ಆದಷ್ಟು ಬೇಗ ಬಂಧಿಸಲಾಗುವುದು. ಈ ವಿಷಯವು ಪ್ರಕ್ರಿಯೆಯಲ್ಲಿದೆ, ಆದ್ದರಿಂದ ಹಿಂದೂ ಅಥವಾ ಮುಸ್ಲಿಂ ಯಾವ ಸಮುದಾಯದ ಜನರು ಈ ಹೋರ್ಡಿಂಗ್‌ಗಳನ್ನು ಹಾಕಿದ್ದಾರೆಂದು ಹೇಳಲು ಸಾಧ್ಯವಿಲ್ಲ” ಎಂದಿದ್ದಾರೆ.

ಪೋಸ್ಟರ್ ಗಳ ಮೇಲೆ ಬರೆಯಲಾದ ಬುಖಾರಿ ಹೇಳಿಕೆ ಬಗ್ಗೆ ನಾವು ತನಿಖೆ ಪ್ರಾರಂಭಿಸಿದ್ದೇವೆ. ಮೊದಲಿಗೆ, ನಾವು ಬುಖಾರಿ ಅವರ ಪೋಸ್ಟರ್‌ನಲ್ಲಿ ಬರೆದ ಹೇಳಿಕೆಯನ್ನು ಹುಡುಕಲು ಪ್ರಾರಂಭಿಸಿದೆವು. ಉತ್ತರ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಹೈದರಾಬಾದ್ ಮತ್ತು ಅಸ್ಸಾಂನಲ್ಲಿ ಮುಸ್ಲಿಮರು ಬಹುಸಂಖ್ಯಾತರಾಗಿದ್ದಾರೆ ಎಂದು ಬುಖಾರಿ ಪೋಸ್ಟರ್ ಹೇಳುತ್ತದೆ. ಇಸ್ಲಾಂ ಧರ್ಮದ ಪ್ರಕಾರ, ಮುಸ್ಲಿಂ ಬಹುಸಂಖ್ಯಾತ ಪ್ರದೇಶಗಳಲ್ಲಿ ಮುಸ್ಲಿಮೇತರರ ಉಪಸ್ಥಿತಿಯನ್ನು ನಿಷೇಧಿಸಲಾಗಿದೆ. ಹಿಂದೂಗಳು ಈ ಪ್ರದೇಶವನ್ನು ತೊರೆಯುತ್ತಾರೆ, ಇಲ್ಲದಿದ್ದರೆ ನಾವು ಕಾಶ್ಮೀರಿ ಪಂಡಿತರಿಗೆ ಮಾಡಿದ್ದನ್ನು ಮಾಡುತ್ತೇವೆ ಎಂದು ಇದರಲ್ಲಿದೆ. ಆದರೆ ಇಂತಹ ಹೇಳಿಕೆ ನೀಡಿದ್ದಾರೆ ಎಂಬ ಬಗ್ಗೆ ಯಾವುದೇ ಸಾಕ್ಷ್ಯಗಳು ಕಂಡುಬಂದಿಲ್ಲ ತನಿಖೆಯ ಸಮಯದಲ್ಲಿ, ಹಿಂದೂ ಹುನ್ ಮಾಯ್ ಎಂಬ ಫೇಸ್ಬುಕ್ ಪುಟವು ಈ ಹೇಳಿಕೆಯನ್ನು ಮೊದಲು ಜನವರಿ 2014 ರಲ್ಲಿ ಬುಖಾರಿ ಹೆಸರಿನಲ್ಲಿ ಹಂಚಿಕೊಂಡಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಇನ್ನು 2011ರ ಜನಗಣತಿಯ ಪ್ರಕಾರ ಹಿಂದೂ-ಮುಸ್ಲಿಂ ಜನಸಂಖ್ಯೆಯನ್ನು ಪರಿಶೀಲಿಸಿದಾಗ, ಉತ್ತರ ಪ್ರದೇಶ, ಕೇರಳ, ಪಶ್ಚಿಮ ಬಂಗಾಳ, ಹೈದರಾಬಾದ್ ಮತ್ತು ಅಸ್ಸಾಂನಲ್ಲಿ ಹಿಂದೂ ಜನಸಂಖ್ಯೆಯೇ ಬಹುಸಂಖ್ಯಾತವಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ.

ಒಟ್ಟಾರೆಯಾಗಿ ಹೇಳುವುದಾದರೆ, ಮುಸ್ಲಿಮರು ಬಹುಸಂಖ್ಯಾತರಾಗಿರುವ ಜಾಗದಿಂದ ಹಿಂದೂಗಳು ತಕ್ಷಣ ಜಾಗಖಾಲಿ ಮಾಡಬೇಕು ಎಂದು ದೆಹಲಿಯ ಜಾಮಾ ಮಸೀದಿಯ ಶಾಹಿ ಇಮಾಮ್‌ ಮೌಲಾನಾ ಸೈಯದ್‌ ಅಹ್ಮದ್‌ ಬುಖಾರಿ ಹೇಳಿದ್ದಾರೆ ಎಂಬ ಹೇಳಿಕೆ ನಕಲಿಯಾಗಿದ್ದು, ಇದು 2021ರಿಂದಲೂ ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರವಾಗುತ್ತಿದೆ. ಇಂತಹ ಬ್ಯಾನರ್ ಹಾಕಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.


ಇದನ್ನು ಓದಿ: ಬಾಗ್ಪತ್‌ನಲ್ಲಿ ಯುವಕರು ಸಾಗಿಸುತ್ತಿದ್ದ ಧಾರ್ಮಿಕ ಧ್ವಜವು ಪಾಕಿಸ್ತಾನದ ಧ್ವಜವಲ್ಲ ಎಂದು ಯುಪಿ ಪೊಲೀಸರು ಸ್ಪಷ್ಟಪಡಿಸಿದ್ದಾರೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *