Fact Check | ಕನೌಜ್ ಅತ್ಯಾಚಾರದ ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಹೆದರಿ ಅಖಿಲೇಶ್ ಯಾದವ್ ಓಡಿ ಹೋದರು ಎಂಬುದು ಸುಳ್ಳು

” ಕನೌಜ್‌ನಲ್ಲಿ ಅತ್ಯಾಚಾರ ಪ್ರಕರಣಕ್ಕೆ ಸಂಬಂಧ ಪಟ್ಟಂತೆ  ಪತ್ರಕರ್ತರು ಅಖಿಲೇಶ್‌ ಯಾದವ್‌ ಅವರ ಮುಂದೆ ಹಲವು ಪ್ರಶ್ನೆಗಳನ್ನು ಇಟ್ಟಿದ್ದರು, ಆದರೆ ಪತ್ರಕರ್ತರ ಯಾವ ಪ್ರಶ್ನೆಗಳಿಗೂ ಉತ್ತರಿಸದ ಅಖಿಲೇಶ್‌ ಯಾದವ್‌ ಅವರು ಹೆದರಿಕೊಂಡು ಕಾಂಪೌಂಡ್‌ ಗೇಟ್‌ ಹಾರಿ ಓಡಿಹೋಗಿದ್ದಾರೆ. ಈ ರೀತಿಯ ನಾಯಕನನ್ನು ಉತ್ತರ ಪ್ರದೇಶ ಈ ಹಿಂದೆ ಎಂದೂ ನೋಡಿರಲಿಲ್ಲ. ” ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು, ಸಾಕಷ್ಟು ವೈರಲ್‌ ಕೂಡ ಆಗಿದೆ.

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋಗೆ ವಿವಿಧ ಬರಹಗಳನ್ನು ಬರೆದು ಹಂಚಿಕೊಳ್ಳಲಾಗುತ್ತಿದ್ದು, ಕಾನೌಜ್‌ ಅತ್ಯಾಚಾರ ಪ್ರಕರಣದಲ್ಲಿ ಅಖಿಲೇಶ್‌ ಯಾದವ್‌ ಅವರ ಕೈವಾಡ ಕೂಡ ಇದೆ ಎಂದು ಸಾಕಷ್ಟು ಮಂದಿ ನಂಬಿಕೊಂಡಿದ್ದಾರೆ. ಹೀಗಾಗಿ ವೈರಲ್‌ ವಿಡಿಯೋವನ್ನು ಹಲವರು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡು ಉತ್ತರ ಪ್ರದೇಶದ ಸಮಾಜವಾದಿ ಪಕ್ಷದ ವಿರುದ್ಧ ಕಿಡಿ ಕಾರಲು ಪ್ರಾರಂಭಿಸಿದ್ದಾರೆ. ಹೀಗೆ ಹಂಚಿಕೊಳ್ಳಲಾಗುತ್ತಿರುವ ವಿಡಿಯೋವಿನ ಅಸಲಿಯತ್ತು ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ನಾವು ವೈರಲ್‌ ವಿಡಿಯೋವಿನ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಸಮಾಜವಾದಿ ಪಾರ್ಟಿಯ ಅಧಿಕೃತ ಎಕ್ಸ್‌ ಹ್ಯಾಂಡಲ್‌ನಲ್ಲೇ ವೈರಲ್‌ ವಿಡಿಯೋ ಕಂಡು ಬಂದಿದ್ದು, ಈ ವಿಡಿಯೋವನ್ನು 11 ಆಕ್ಟೋಬರ್‌ 2023ರಂದು ಮೊದಲ ಬಾರಿಗೆ ಹಂಚಿಕೊಳ್ಳಲಾಗಿದೆ ಎಂಬುದು ತಿಳಿದು ಬಂದಿದೆ.

ಈ ವಿಡಿಯೋದ ಆಧಾರದ ಮೇಲೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ ವಿವಿಧ ಮಾಧ್ಯಗಳ ವರದಿಗಳು ಕೂಡ ಪತ್ತೆಯಾಗಿದೆ. ಈ ವರದಿಗಳ ಪ್ರಾಕಾರ ಜಯಪ್ರಕಾಶ್ ನಾರಾಯಣ ಅವರ ಜನ್ಮ ದಿನದ ಪ್ರಯುಕ್ತ ಅಕ್ಟೋಬರ್ 11, 2023ರಂದು ಲಕ್ನೋದ ಜಯಪ್ರಕಾಶ್ ನಾರಾಯಣ್ ಇಂಟರ್‌ನ್ಯಾಷನಲ್ ಸೆಂಟರ್ (ಜೆಪಿಎನ್ಐಸಿ) ನಲ್ಲಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆದರೆ, ಸರ್ಕಾರ ಜೆಪಿಎನ್ಐಸಿ ಗೇಟ್‌ಗೆ ಬೀಗ ಹಾಕಿ ಒಳಗೆ ಪ್ರವೇಶಿಸದಂತೆ ತಡೆದಿತ್ತು. ಈ ವೇಳೆ ಅಖಿಲೇಶ್ ಯಾದವ್ ಅವರು ಗೇಟ್ ಹಾರಿ ಒಳನುಗ್ಗಿ ಜಯಪ್ರಕಾಶ್ ನಾರಾಯಣ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಮಾಹಿತಿ ಇಲ್ಲದ ಹಲವರು ಸುಳ್ಳು ಬರಹಗಳೊಂದಿಗೆ ವಿಡಿಯೋವನ್ನು ಎಲ್ಲೆಡೆ ಹಂಚಿಕೊಳ್ಳುತ್ತಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ರೀತಿ ಕನೌಜ್‌ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗೆ ಅಖಿಲೇಶ್‌ ಯಾದವ್‌ ಅವರು ಹೆದರಿ ಕಾಂಪೌಂಡ್‌ ಹಾರಿ ಓಡಿಹೋಗಿದ್ದಾರೆ ಎಂಬುದು ಸುಳ್ಳು.  ವೈರಲ್‌ ವಿಡಿಯೋ ಜಯಪ್ರಕಾಶ್ ನಾರಾಯಣ ಅವರ ಜನ್ಮ ದಿನದ ಪ್ರಯುಕ್ತದ ಕಾರ್ಯಕ್ರಮದಲ್ಲಿ ಉಂಟಾದ ಪ್ರತಿಭಟನೆಗೆ ಸಂಬಂಧಿಸಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ಹಂಚಿಕೊಳ್ಳುವ ಮುನ್ನ ಎಚ್ಚರವಹಿಸಿ.


ಇದನ್ನೂ ಓದಿ : Fact Check: ವಿಮಾನ ನಿಲ್ದಾಣದಲ್ಲಿ ಮನಮೋಹನ್‌ ಸಿಂಗ್‌ ಪುತ್ರಿ ಅಮೃತ್ ಸಿಂಗ್‌ರನ್ನು ರಾಹುಲ್‌ ಗಾಂಧಿ ಭೇಟಿಯಾಗಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *