ಬಿಹಾರದ ಸಂಸದ ರಾಜೇಶ್ ರಂಜನ್ ಅಲಿಯಾಸ್ ಪಪ್ಪು ಯಾದವ್ ಕಾರಿನಲ್ಲಿ ಕುಳಿತು ಮಾಧ್ಯಮದವರ ಮುಂದೆ ಕಣ್ಣೀರು ಹಾಕುತ್ತಾ ಮಾತನಾಡಿದ್ದಾರೆ. ರಾಜಕಾರಣಿ ಬಾಬಾ ಸಿದ್ದಿಕಿ ಹತ್ಯೆಯ ನಂತರ ಈ ಘಟನೆ ನಡೆದಿದೆ ಎಂದು ವಿಡಿಯೋವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.
“ಪಪ್ಪು ಯಾದವ್ ಇಂದು ಸಂಜೆ ಲಾರೆನ್ಸ್ ಬಿಷ್ಣೋಯಿ ಅವರನ್ನು ಕೊಲ್ಲುತ್ತಿದ್ದರು. ಬಹುಶಃ ಆ ದಾರಿಯಲ್ಲಿ ಅವರಿಗೆ ಯಾರಾದರೂ ಹೊಡೆದಿರಬಹುದು; ಅದಕ್ಕೆ ಅವನು ಜೋರಾಗಿ ಅಳುತ್ತಿದ್ದಾನೆ” ಎಂಬ ಶೀರ್ಷಿಕೆಯೊಂದಿಗೆ ಬಳಕೆದಾರರು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.
ಫ್ಯಾಕ್ಟ್ ಚೆಕ್ :
ಈ ವೈರಲ್ ವಿಡಿಯೋದ ಕುರಿತು ನಿಜ ತಿಳಿದುಕೊಳ್ಳಲು, ವಿಡಿಯೋದ ದೃಶ್ಯಗಳನ್ನು ಸ್ಕ್ರೀನ್ಶಾಟ್ ತೆಗೆದು Google ರಿವರ್ಸ್ ಇಮೇಜ್ ಬಳಸಿಕೊಂಡು ಹುಡುಕಿದಾಗ, 2018ರ ಸೆಪ್ಟೆಂಬರ್ 6ರಂದು ದಿ ಕ್ವಿಂಟ್ ಹಿಂದಿ YouTube ಚಾನಲ್ ಹಂಚಿಕೊಂಡ ವಿಡಿಯೋ ದೊರೆತಿದೆ. ಆ ವಿಡಿಯೋದ ವಿವರಣೆಯ ಪ್ರಕಾರ, ಪಪ್ಪು ಯಾದವ್ ‘ನಾರಿ ಬಚಾವೋ ಯಾತ್ರೆ’ಗೆ ತೆರಳುತ್ತಿದ್ದಾಗ ‘ಭಾರತ್ ಬಂದ್’ (ರಾಷ್ಟ್ರವ್ಯಾಪಿ ಮುಷ್ಕರ) ಸಂದರ್ಭದಲ್ಲಿ ಪ್ರತಿಭಟನಾಕಾರರಿಂದ ಹಲ್ಲೆಗೊಳಗಾಗಿದ್ದಾರೆ. ನಂತರ ಯಾದವ್ ಸುದ್ದಿಗಾರರೊಂದಿಗೆ ಭಾವುಕರಾಗಿ ಮಾತನಾಡಿದ್ದಾರೆ ಎಂದು ತಿಳಿದುಬಂದಿದೆ. ಹಾಗಾಗಿ ಈ ವೈರಲ್ ವಿಡಿಯೋ ಸಿದ್ದಿಕಿ ಹತ್ಯೆಯ ಮೊದಲು ನಡೆದಿತ್ತು ಎಂದು ನಿಖರವಾಗಿ ತಿಳಿದುಬಂದಿದೆ.
2018 ರ NDTV ಯ ವರದಿಯ ಪ್ರಕಾರ, ಆ ವರ್ಷ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯಿದೆಗೆ ಮಾಡಿದ ಬದಲಾವಣೆಗಳನ್ನು ವಿರೋಧಿಸಿ 2018ರ ಸೆಪ್ಟೆಂಬರ್ 6ರಂದು ರಾಷ್ಟ್ರವ್ಯಾಪಿ ಮುಷ್ಕರವನ್ನು ಆಯೋಜಿಸಲಾಗಿತ್ತು. ಪಪ್ಪು ಯಾದವ್ ಮಹಿಳಾ ಸುರಕ್ಷತೆಯ ರ್ಯಾಲಿಗೆ ತೆರಳುತ್ತಿದ್ದಾಗ ಮುಜಾಫರ್ಪುರದಲ್ಲಿ ಪ್ರತಿಭಟನಾಕಾರರು ನನ್ನನ್ನು ತಡೆದು ನಿಲ್ಲಿಸಿ, ತನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ. ಈ ಘಟನೆಯ ಕುರಿತು 2018ರಲ್ಲಿ ಅಮರ್ ಉಜಾಲಾ ವರದಿ ಮಾಡಿದೆ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ಕಾಯ್ದೆಗೆ ಮಾಡಿರುವ ಬದಲಾವಣೆಗಳನ್ನು ವಿರೋಧಿಸಿ 2018ರ ಸೆಪ್ಟೆಂಬರ್ ತಿಂಗಳಲ್ಲಿ 35 ಮೇಲ್ಜಾತಿ ಗುಂಪುಗಳು ‘ಭಾರತ್ ಬಂದ್’ ಆಯೋಜಿಸಿ ಪ್ರತಿಭಟನೆಗಳನ್ನು ನಡೆಸಿದ್ದವು. ಈ ಕಾಯಿದೆಯ ಅಡಿಯಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸಲು ಅವಕಾಶ ನೀಡುವ ನಿಬಂಧನೆಯನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್ನ ತೀರ್ಪನ್ನು ತಿದ್ದುಪಡಿ ಮಾಡುವ ಮಸೂದೆಗೆ ರಾಜ್ಯಸಭೆಯು ಅನುಮೋದನೆಯನ್ನು ನೀಡಿದ್ದಕ್ಕೆ ಪ್ರತಿಭಟನೆ ನಡೆದಿತ್ತು ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ಒಟ್ಟಾರೆಯಾಗಿ ಹೇಳುವುದಾದರೆ, 2018ರಲ್ಲಿ ಪ್ರತಿಭಟನಾಕಾರರಿಂದ ಹಲ್ಲೆಗೊಳಗಾಗಿ ಯಾದವ್ ಭಾವುಕರಾಗಿರುವ ದೃಶ್ಯವನ್ನು ಬಾಬಾ ಸಿದ್ದಿಕಿ ಹತ್ಯೆಗೆ ಸಂಬಂಧಿಸಿದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.
ಇದನ್ನು ಓದಿ :
Fact Check : ಇಸ್ರೇಲ್ ಇರಾನ್ ಮೇಲೆ ದಾಳಿ ನಡೆಸಿದೆ ಎಂದು ವಿಡಿಯೋ ಗೇಮ್ ದೃಶ್ಯ ಹಂಚಿಕೆ
ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್ಚೆಕ್ ವಾಟ್ಸಾಪ್ ನಂಬರ್ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.