Fact Check | ಈದ್ ಮಿಲಾದ್ ವೇಳೆ ಭಾಗ್ಯಲಕ್ಷ್ಮಿ ಮಂದಿರದ ಮೇಲೆ ಮುಸ್ಲಿಮರಿಂದ ದಾಳಿ ಎಂಬುದು ಸುಳ್ಳು

ಸಾಮಾಜಿಕ ಜಾಲತಾಣದಲ್ಲಿ ಅಸ್ಪಷ್ಟವಾಗಿರುವ ವಿಡಿಯೋವೊಂದು ವ್ಯಾಪಕವಾಗಿ‌ ಹಂಚಿಕೊಳ್ಳಲಗುತ್ತಿದ್ದು, ಈ ವಿಡಿಯೋದಲ್ಲಿ ಪೊಲೀಸರು ಸಾರ್ವಜನಿಕರನ್ನು ಬ್ಯಾರಿಕೇಡ್ ದಾಟದಂತೆ ತಡೆಯುತ್ತಿರುವುದನ್ನು ಕಾಣಬಹುದಾಗಿದೆ. ಇದನ್ನೇ ಲಾಭವಾಗಿ ಬಳಸಿಕೊಂಡಿರುವ ಹಲವರು ಹೈದರಾಬಾದ್‌ನ ಚಾರ್ಮಿನಾರ್ ಬಳಿ  ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ವೇಳೆ ಮುಸಲ್ಮಾನರು ಅಲ್ಲೇ ಇದ್ದ ಶ್ರೀ ಭಾಗ್ಯಲಕ್ಷ್ಮಿ ಮಠದ ಮಂದಿರದ ಬಳಿ ನುಗ್ಗಲು ಯತ್ನಿಸಿದ್ದಾರೆ, ಇನ್ನೂ ಕೆಲವರು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂದು ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ.

ಇದೇ ಪ್ರತಿಪಾದನೆಯನ್ನು ಬಳಸಿಕೊಂಡು ಹಲವರು ತಮ್ಮ ಸಾಮಾಜಿಕ ಜಾಲತಾಣದ ವೈಯಕ್ತಿಕ ಖಾತೆಗಳಲ್ಲಿ ಹಂಚಿಕೊಂಡು, ಮುಸಲ್ಮಾನ ಸಮುದಾಯದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸುತ್ತಿದ್ದಾರೆ‌. ಇದರಿಂದ ಸಾರ್ವಜನಿಕ ವಲಯದಲ್ಲಿ ವೈರಲ್ ವಿಡಿಯೋ ಬಗ್ಗೆ ಹಲವು ಗೊಂದಲಗಳು ಕೂಡ ಮೂಡುವಂತೆ ಮಾಡುತ್ತಿದೆ. ಹೀಗಾಗಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್ ವಿಡಿಯೋವಿನ ನೈಜತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆ‌ಕ್‌ನಲ್ಲಿ‌ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ‌ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಮುಂದಾಯಿತು. ಇದಕ್ಕಾಗಿ ನಾವು ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಗೂಗಲ್‌ನಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಹಲವು ಮಂದಿ ವಿವಿಧ ರೀತಿಯಾದ ಹೇಳಿಕೆಯನ್ನು ನೀಡಿರುವುದು ನಮ್ಮ ಗಮನಕ್ಕೆ ಬಂದಿದೆ. ಅದರಲ್ಲೂ ಪ್ರಮುಖವಾಗಿ ಹಲವರು ಇದು ಗಲಭೆಯ ಘಟನೆಯಲ್ಲ, ಡಿಜೆ ಸೌಂಡ್‌ ಬಾಕ್ಸ್‌ನಲ್ಲಿ ಕಂಡು ಬಂದ ಬೆಂಕಿಯಿಂದ ಉಂಟಾದ ಗದ್ದಲ ಎಂದು ಎಕ್ಸ್‌ ಪೋಸ್ಟ್‌ನಲ್ಲಿ ಬರೆದುಕೊಂಡಿರುವುದು ಕಂಡು ಬಂದಿದೆ.

ಹೀಗಾಗಿ ನಾವು ಈ ಬಗ್ಗೆ ಇನ್ನಷ್ಟು ಪರಿಶೀಲನೆಯನ್ನು ನಡೆಸಿದೆವು. ಈ ವೇಳೆ ನಮಗೆ ಪೊಲೀಸ್‌ ಆಯುಕ್ತ ಸಿ.ವಿ ಆನಂದ್‌ ಅವರು ತಮ್ಮ ಎಕ್ಸ್‌ ಖಾತೆಯ ಪೋಸ್ಟ್‌ನಲ್ಲಿ ಘಟನೆಯ ಬಗ್ಗೆ ಮಾಹಿತಿ ನೀಡಿರುವುದು ಕಂಡು ಬಂದಿದೆ. ಇದರಲ್ಲಿ ಅವರು ” ನಾವು ಮಿಲಾದ್ ಬಂದೋಬಸ್ತ್ ಅನ್ನು ಮುಗಿಸುವ ಹೊತ್ತಿಗೆ ಅದು ಮುಂಜಾನೆಯಾಗಿತ್ತು ಮತ್ತು ಹಿಂದಿರುಗುವ ಪ್ರಯಾಣದಲ್ಲಿ ಯಾವುದೇ ಘರ್ಷಣೆಗಳು ನಡೆಯದಂತೆ ನೋಡಿಕೊಳ್ಳಲು ರಾತ್ರಿಯಿಡೀ ಬೀದಿಗಳಲ್ಲಿ ಬೆಂಗಾವಲು ಮತ್ತು ಗಸ್ತು ತಿರುಗುವುದನ್ನು ಒಳಗೊಂಡಿತ್ತು. ಅಂತಿಮವಾಗಿ ಎರಡೂ ಉತ್ಸವಗಳು ಬೃಹತ್ ಮೆರವಣಿಗೆಗಳೊಂದಿಗೆ ಶಾಂತಿಯುತವಾಗಿ ಮುಕ್ತಾಯಗೊಂಡವು” ಎಂದು ಉಲ್ಲೇಖಿಸಿದ್ದಾರೆ. ಆದರೆ ಇವರ ಈ ಎಕ್ಸ್‌ ಪೋಸ್ಟ್‌ನಲ್ಲಿ ಎಲ್ಲಿಯೂ ಭಾಗ್ಯಲಕ್ಷ್ಮಿ ಮಂದಿರಕ್ಕೆ ಬೆಂಕಿ ಬಿದ್ದಿದೆ ಅಥವಾ ಕೋಮು ಸಂಘರ್ಷ ಉಂಟಾಗಿದೆ ಎಂಬ ಮಾಹಿತಿಯೇ ಇಲ್ಲದಿರುವುದು ಸ್ಪಷ್ಟವಾಗಿ ಕಂಡು ಬಂದಿದೆ. 

ಈ ಬಗ್ಗೆ ಇನ್ನಷ್ಟು ಹುಡುಕಾಟವನ್ನು ನಡೆಸಿದಾಗ ಸಿಯಾಸತ್‌ ಡೈಲಿ ಯೂಟ್ಯುಬ್‌ ಚಾನಲ್‌ನಲ್ಲಿ ವಿಡಿಯೋ ವರದಿ ಕಂಡು ಬಂದಿದ್ದು, ಇದರಲ್ಲಿ ಡಿಜೆ ಬಾಕ್ಸ್‌ಗೆ ಬೆಂಕಿ ಹತ್ತಿಕೊಂಡಿರುವುದು ಕಂಡು ಬಂದಿದೆ. ಇನ್ನು ಬೆಂಕಿ ನಂದಿಸುವ ಉದ್ದೇಶದಿಂದ ಮತ್ತು ಯಾವುದೇ ರೀತಿಯಾದ ದುರ್ಘಟನೆಗಳು ಸಂಭವಿಸದಂತೆ ತಡೆಯಲು ಪೊಲೀಸರು ಚಾರ್ಮಿನರ್‌ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು, ಆದರೂ ಕೂಡ ಕೆಲವರು ಬ್ಯಾರಿಕೇಡ್‌ ದಾಟಲು ಯತ್ನಿಸಿದ್ದಾರೆ. ಇದಕ್ಕೆ ಪೊಲೀಸರು ಲಘು ಲಾಠೀ ಪ್ರಹಾರವನ್ನು ಕೂಡ ಮಾಡಿರುವುದು ಕಂಡು ಬಂದಿದೆ. ಇಲ್ಲಿಗೆ ಈ ಘಟನೆಯಲ್ಲಿ ಯಾವುದೇ ಕೋಮು ಆಯಾಮವಿಲ್ಲ ಎಂಬುದು ಸಾಭೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಹೈದರಾಬಾದ್‌ನ ಚಾರ್ಮಿನಾರ್ ಬಳಿ  ಈದ್-ಎ-ಮಿಲಾದ್-ಉನ್-ನಬಿ ಮೆರವಣಿಗೆಯ ವೇಳೆ ಮುಸಲ್ಮಾನರು ಅಲ್ಲೇ ಇದ್ದ ಶ್ರೀ ಭಾಗ್ಯಲಕ್ಷ್ಮಿ ಮಠದ ಮಂದಿರದ ಬಳಿ ನುಗ್ಗಲು ಯತ್ನಿಸಿದ್ದಾರೆ, ಇನ್ನೂ ಕೆಲವರು ದೇವಾಲಯಕ್ಕೆ ಬೆಂಕಿ ಹಚ್ಚಿದ್ದಾರೆ ಎಂಬುದು ಸುಳ್ಳಾಗಿದೆ. ಹಾಗಾಗಿ ಯಾವುದೇ ಸುದ್ದಿಗಳನ್ನು ನಂಬುವ ಅಥವಾ ಶೇರ್‌ ಮಾಡುವ ಮುನ್ನ ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಮಹಾರಾಷ್ಟ್ರದಲ್ಲಿ ಡಿಜೆ ಸೌಂಡ್‌ಗಳ ಕಂಪನದಿಂದಾಗಿ ಗೋಡೆ ಕುಸಿದಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವ

Leave a Reply

Your email address will not be published. Required fields are marked *