Fact Check | ಬಾಂಗ್ಲಾದೇಶದ ವೀಡಿಯೊವನ್ನು ಪ.ಬಂಗಾಳದ ವಿಡಿಯೋ ಎಂದು ಸುಳ್ಳು ಮಾಹಿತಿ ಹಂಚಿಕೊಂಡ ಅಮಿತ್‌ ಮಾಳವಿಯಾ

“ಈ ವಿಡಿಯೋ ನೋಡಿ ಇದು ಪಶ್ಚಿಮ ಬಂಗಾಳದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ಪಶ್ಚಿಮ ಬಂಗಾಳದಲ್ಲಿ ಮೇಣದಬತ್ತಿಯ ಮೆರವಣಿಗೆ ಮತ್ತು ಪ್ರತಿಭಟನಾ ರ್ಯಾಲಿಯನ್ನು ನಡೆಸಲಾಗಿದೆ. ಇದು ಭಾರತದ ಇತಿಹಾಸದಲ್ಲಿ ಎಂದೂ ಕಂಡು, ಕೇಳರಿಯದ ಬೃಹತ್‌ ಹೋರಾಟವಾಗಿದೆ” ಎಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಪೋಸ್ಟ್‌ವೊಂದನ್ನು ಹಂಚಿಕೊಳ್ಳಲಾಗುತ್ತಿದೆ. 

ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿನ ಫೊಟೋವನ್ನು ಬಿಜೆಪಿಯ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಕೂಡ ಹಂಚಿಕೊಂಡು ಸಣ್ಣ ಟಿಪ್ಪಣಿಯನ್ನೂ ಪ್ರಕಟಿಸಿ, ತದ ನಂತರ ಪೋಸ್ಟ್‌ ಅನ್ನು ಡಿಲೀಟ್‌ ಮಾಡಿದ್ದಾರೆ. (ಈ ಪೋಸ್ಟ್‌ನ ಆರ್ಕೈವ್‌ ಲಿಂಕ್‌ ಇಲ್ಲಿ ನೀಡಲಾಗಿದೆ) ಇದರ ಮಧ್ಯೆ ಸಾಕಷ್ಟು ಬಿಜೆಪಿಯ ಬೆಂಬಲಿಗರು ಕೂಡ ಇದೇ ವಿಡಿಯೋವನ್ನು ಹಂಚಿಕೊಳ್ಳುತ್ತಿದ್ದಾರೆ. ಇದು ಸಾರ್ವಜನಿಕರಲ್ಲಿ ಸಾಕಷ್ಟು ಗೊಂದಲವನ್ನು ಮೂಡಿಸಿದೆ. ಹೀಗೆ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಅಂತರ್ಜಾದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ನಮಗೆ 9 ಆಗಸ್ಟ್‌ 2024ರಲ್ಲಿ ತಮ್ಜಿದ್ ಇಸ್ಲಾಂ ಜಿಹಾನ್ ಎಂಬುವವರು ಇದೇ ವಿಡಿಯೋವನ್ನು ಹಂಚಿಕೊಂಡಿದ್ದು, ಈ ವಿಡಿಯೋ ಮೂಲತಃ ಬಾಂಗ್ಲಾದೇಶದ ಉತ್ತರಾ ನಗರದ್ದು ಎಂಬುದು ತಿಳಿದು ಬಂದಿದೆ. 

ಈ ಕುರಿತು ಬೂಮ್‌ ಎಂಬ ಆಂಗ್ಲ ವೆಬ್‌ ಸುದ್ದಿತಾಣಕ್ಕೆ ಮಾಹಿತಿ ನೀಡಿದ್ದು, ಅದರಲ್ಲಿ ಅವರು “ನಾನು ಡ್ರೋನ್ ಬಳಸಿ ವೀಡಿಯೊವನ್ನು ಚಿತ್ರೀಕರಿಸಿದ್ದೇನೆ. ಇದು ಹುತಾತ್ಮರ ಸ್ಮರಣಾರ್ಥ ಆಗಸ್ಟ್ 9, 2024 ರಂದು ಉತ್ತರಾದ ಸೆಕ್ಟರ್ 3 ರ ಫ್ರೆಂಡ್ಸ್ ಕ್ಲಬ್ ಮೈದಾನದಲ್ಲಿ ನಡೆದ ಮೇಣದಬತ್ತಿಯ ಜಾಗರಣೆಯಾಗಿದೆ” ಎಂದು ಹೇಳಿಕೆಯನ್ನು ನೀಡಿದ್ದಾರೆ ಎಂಬುದನ್ನು ಉಲ್ಲೇಖಿಸಲಾಗಿದೆ. ಇನ್ನು ಈ ಕುರಿತು ಫೈಯಾಸ್‌ ಎಂಬುವವರು 9 ಆಗಸ್ಟ್‌ 2024ರಂದು ಎಕ್ಸ್‌ ಪೋಸ್ಟ್‌ ಮಾಡಿದ್ದು ಅವರು ಕೂಡ ತಮ್ಮ ಟ್ವೀಟ್‌ನಲ್ಲಿ “ಇಂದು ಇಡೀ ಸಮಾಜ ಬಾಂಧವರು ಹುತಾತ್ಮರನ್ನು ಸ್ಮರಿಸುವುದಕ್ಕಾಗಿ ಉತ್ತರಾ ಗೆಳೆಯರ ಬಳಗದಲ್ಲಿ ಮೇಣದಬತ್ತಿಯ ಮೆರವಣಿಗೆ ಮತ್ತು ರಾಷ್ಟ್ರಗೀತೆ ಕಾರ್ಯಕ್ರಮ” ಎಂದು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ ಹಾಗೂ ಬೂಮ್‌ನ ಮಾಹಿತಿಯನ್ನು ಪರಿಶೀಲಿಸಿದ ನಂತರ ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಅವರ ಪೋಸ್ಟ್‌ ಸುಳ್ಳಾಗಿದೆ ಎಂಬುದು ಸಾಬೀತಾಗಿದೆ. 

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಂತೆ ಪಶ್ಚಿಮ ಬಂಗಾಳದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಅತ್ಯಾಚಾರ ಮತ್ತು ಹತ್ಯೆಗೀಡಾದ ಸಂತ್ರಸ್ತೆಗೆ ನ್ಯಾಯಕ್ಕಾಗಿ ಒತ್ತಾಯಿಸಿ ಪಶ್ಚಿಮ ಬಂಗಾಳದಲ್ಲಿ ಮೇಣದಬತ್ತಿಯ ಮೆರವಣಿಗೆ ಮತ್ತು ಪ್ರತಿಭಟನಾ ರ್ಯಾಲಿ ನಡೆಸಲಾಗಿದೆ ಎಂಬುದು ಸುಳ್ಳು.  ಬಿಜೆಪಿ ಐಟಿ ಸೆಲ್‌ ಮುಖ್ಯಸ್ಥ ಅಮಿತ್‌ ಮಾಳವಿಯಾ ಕೂಡ ಇದೇ ಸುಳ್ಳು ಮಾಹಿತಿಯನ್ನು ಹಂಚಿಕೊಂಡಿರುವುದು ಸಾಬೀತಾಗಿದೆ.


ಇದನ್ನೂ ಓದಿ : Fact Check | ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಹಿಂದೂ ಗೆಳತಿಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ರಷ್ಯಾ ವಿಡಿಯೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *