Fact Check | ಬಾಂಗ್ಲಾದಲ್ಲಿ ಪರಿಹಾರ ನೀಡುವ ನೆಪದಲ್ಲಿ ಹಿಂದೂ ಬಾಲಕನ ತಾಯತ ತೆಗೆಯಲಾಗಿದೆ ಎಂಬುದು ಸುಳ್ಳು

“ಈ ವಿಡಿಯೋ ನೋಡಿ ಇಲ್ಲಿ ಹಿಂದೂ ಬಾಲಕನೊಬ್ಬನ ತಾಯತವನ್ನು ಮುಸ್ಲಿಂ ಮೌಲ್ವಿಯೊಬ್ಬ ತನ್ನ ಬಾಯಿಯಿಂದ ಕಚ್ಚಿ ಕತ್ತರಿಸಿದ್ದಾನೆ. ಬಳಿಕ ಆ ಹಿಂದೂ ಬಾಲಕನಿಗೆ ಒಂದಷ್ಟು ದಿನಸಿ ಸಾಮಗ್ರಿಗಳನ್ನು ಪ್ಲಾಸ್ಟಿಕ್‌ನಲ್ಲಿ ಹಾಕಿ ಕೊಟ್ಟಿದ್ದಾನೆ. ಈ ಘಟನೆ ನಡೆದಿರುವುದು ಬಾಂಗ್ಲಾದೇಶದಲ್ಲಿ. ಇಂದು ಭಾರತದಲ್ಲಿ ಯಾರೆಲ್ಲ ಬಾಂಗ್ಲಾದೇಶಕ್ಕೆ ಬೆಂಬಲವನ್ನು ನೀಡುತ್ತಿದ್ದಾರೋ ಅವರೆಲ್ಲ ಇದಕ್ಕೆ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕು” ಎಂದು ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದೇ ವಿಡಿಯೋವನ್ನು ಬಳಸಿಕೊಂಡು ಬಿಜೆಪಿ ಬೆಂಬಲಿತ ಸುದ್ದಿ ತಾಣವಾದ ಒಪ್‌ಇಂಡಿಯಾ.ಕಾಮ್ ವರದಿಯನ್ನು ಪ್ರಕಟಿಸಿದ್ದು, ಇದರ ಜೊತೆಗೆ ಹಲವು ಮಂದಿ ಬಿಜೆಪಿ ಬೆಂಬಲಿಗರು ಈ ವಿಡಿಯೋವನ್ನು ಶೇರ್ ಮಾಡುತ್ತಿದ್ದಾರೆ. ಇದನ್ನು ನೋಡಿದ ಕೆಲ ಜನಸಾಮಾನ್ಯರು ಕೂಡ ಇದು ನಿಜವೆಂದು ಭಾವಿಸಿ, ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಹೀಗೆ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋವಿನ ಸತ್ಯಾಸತ್ಯತೆ ಏನು ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿರುವ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ, ಅಂತರ್ಜಲದಲ್ಲಿ ಹುಡುಕಾಟವನ್ನು ನಡೆಸಲಾಯಿತು. ಈ ವೇಳೆ ತೌಹೀದ್‌ ಮತ್ತು ಇಸ್ಲಾಮಿಕ್ ಸೆಂಟರ್ ಎಂಬ ಹೆಸರಿನ ಫೇಸ್‌ಬುಕ್‌ ಪುಟವೊಂದರಲ್ಲಿ ಇದೇ ಫೋಟೋ ಮತ್ತು ವಿಡಿಯೋಗಳು ಕಾಣಿಸಿಕೊಂಡಿದ್ದವು.

ಈ ಪೋಸ್ಟ್‌ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದಾಗ, ಅದರಲ್ಲಿ ತೌಹೀದ್‌ ಅಕಾಡೆಮಿ ಮತ್ತು ಇಸ್ಲಾಮಿಕ್ ಸೆಂಟರ್ ನವಕಾಲಿಯ ಪ್ರವಾಹ ಸಂತ್ರಸ್ಥರಲ್ಲಿ 200ಕ್ಕೂ  ಅಧಿಕ ಕುಟುಂಬಗಳಿಗೆ ಪರಿಹಾರವನ್ನು ಒದಗಿಸಿದೆ ಎಂಬ ಶೀರ್ಷಿಕೆಯನ್ನು ನೀಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಲವೊಂದು ಕೀವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿದಾಗ, ಆಲ್ಟ್ ನ್ಯೂಸ್ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್ ಅವರ ಎಕ್ಸ್ ಖಾತೆಯ ಪೋಸ್ಟ್‌ವೊಂದು ಕಂಡುಬಂದಿದೆ. ಇದರಲ್ಲಿ ಅವರು ವೈರಲ್ ವಿಡಿಯೋ ಸುಳ್ಳಿನಿಂದ ಕೂಡಿದೆ ವೈರಲ್ ವಿಡೀಯೋದಲ್ಲಿ ಕಂಡು ಬಂದ ಬಾಲಕ ಹಿಂದೂವಲ್ಲ. ಆತ ಮುಸಲ್ಮಾನ ಬಾಲಕನಾಗಿದ್ದು, ಆತನ ಆತನ ಹೆಸರು ಸೊಹೇಲ್ ಮತ್ತು ಆತನ ಪೋಷಕರ ಹೆಸರನ್ನು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ. ಇಲ್ಲಿಗೆ ಬಾಲಕ ಹಿಂದೂ ಅಲ್ಲ ಮುಸಲ್ಮಾನ ಎಂಬುದು ತಿಳಿದು ಬಂದಿದೆ.

ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿಯಲ್ಲಿ ಬಾಂಗ್ಲಾದೇಶದಲ್ಲಿ ಹಲವಾರು ಮುಸ್ಲಿಂ ಮೌಲ್ವಿಗಳು, ಹಿಂದೂಗಳ ತಾಯತವನ್ನು ಕತ್ತರಿಸುತ್ತಿದ್ದಾರೆ ಎಂಬುದು ನಿಜವೇ ಎಂಬುದನ್ನು ಪರಿಶೀಲನೆ ನಡೆಸಿದಾಗ, ಹೀಗೆ ತಯಾತಗಳನ್ನು ಕತ್ತರಿಸುತ್ತಿರುವುದು ಹಿಂದುಗಳದ್ದಲ್ಲ, ಮುಸಲ್ಮಾನರದ್ದು ಎಂಬುದು ತಿಳಿದುಬಂದಿದೆ. ಇದು ಮುಸಲ್ಮಾನರಲ್ಲಿನ ಮೌಢ್ಯಗಳನ್ನು ಹೋಗಲಾಡಿಸಲು ತೆಗೆದುಕೊಂಡ ಕ್ರಮ ಎಂಬುದು ತಿಳಿದು ಬಂದಿದೆ. ಕುರಿತು ಹುಡುಕಿದಾಗ 31 ಆಗಸ್ಟ್ 2024 ರಂದು ಎಕ್ಸ್ ಖಾತೆಯ ಪೋಸ್ಟ್ ಒಂದು ಕಂಡುಬಂದಿದ್ದು, ಅದರಲ್ಲಿ ಪ್ರವಾಹ ಸಂತ್ರಸ್ಥರಿಗೆ ಆಹಾರ ವಿತರಿಸುವ ಸಂದರ್ಭದಲ್ಲಿ ಅವರ ತಾಯಿತಗಳನ್ನು ಕತ್ತರಿಸಲಾಗುತ್ತಿದೆ ಮತ್ತು ಈ ಸಂದರ್ಭದಲ್ಲಿ ಹಿಂದೂ ಮತ್ತು ಶೀಯಾ ಕುಟುಂಬಗಳಿಗೆ ಪಡಿತರವನ್ನು ನೀಡಲಾಗಿಲ್ಲ ಎಂಬುದನ್ನು ಕೂಡ ಉಲ್ಲೇಖಿಸಲಾಗಿದೆ.

ಈ ಬಗೆಗಿನ ಇನ್ನಷ್ಟು ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ 24 ಆಗಸ್ಟ್ 2024 ರಂದು ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾದ ಮತ್ತೊಂದು ಪೋಸ್ಟ್ ಕಂಡು ಬಂದಿದೆ. ಇದರಲ್ಲಿ ಮೌಢ್ಯಯುತವಾದ ಬರಹವಿದ್ದು, ಅದರಲ್ಲಿ “ತಾಯತ ಧರಿಸಿ ನೀವು ಆಹಾರ ಸೇವಿಸಿ ಶಿರ್ಕ್‌ (ಅಂದರೆ ಪಾಪ) ಸ್ಥಿತಿಯಲ್ಲಿ ಸತ್ತರೆ ನೀವು ನರಕವಾಸಿಯಾಗುತ್ತಿರಿ” ಎಂದು ಉಲ್ಲೇಖಿಸಲಾಗಿದೆ. ಇಲ್ಲಿ ಮುಸಲ್ಮಾರನಲ್ಲೇ ಹಲವು ರೀತಿಯ ನಂಬಿಕೆಗಳಿವೆ. ಕೆಲವು ಮುಸಲ್ಮಾನರು ತಯಾತವನ್ನು ಧರಿಸಿದರೆ, ಇನ್ನೂ ಕೆಲ ಮುಸಲ್ಮಾನರು ತಾಯತ ಧರಿಸುವುದನ್ನು ವಿರೋಧಿಸುತ್ತಾರೆ. ಹೀಗಾಗಿ ವಿಡಿಯೋದಲ್ಲಿ ಕೂಡ ಮುಸಲ್ಮಾನರು ಮುಸಲ್ಮಾನರ ತಾಯತವನ್ನು ಕತ್ತರಿಸಿದ್ದಾಯೇ ಹೊರತು ಹಿಂದೂಗಳ ತಯಾತವಲ್ಲ.

ಒಟ್ಟಾರೆಯಾಗಿ ಹೇಳುವುದಾದರೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗುತ್ತಿರುವ ರೀತಿ, ಹಿಂದೂ ಬಾಲಕನ ತಾಯತವನ್ನು ಮುಸಲ್ಮಾನ ಮೌಲ್ವಿಗಳು ಕತ್ತರಿಸಿದ್ದಾರೆ ಮತ್ತು ಆ ಮೂಲಕ ತಮ್ಮ ಧರ್ಮಾಂಧತೆಯನ್ನು ಪ್ರದರ್ಶಿಸಿದ್ದಾರೆ ಎಂಬ ಪೋಸ್ಟ್ ಸುಳ್ಳಿನಿಂದ ಕೂಡಿದೆ. ಹೀಗಾಗಿ ಇಂತಹ ಸುಳ್ಳು ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳುವುದು ಉತ್ತಮ


ಇದನ್ನೂ ಓದಿ : Fact Check | ಕುಮಾರಿ ಸೆಲ್ಜಾ ಅವರು ಹಿಂದೂ ಭಾವನೆಗಳಿಗೆ ಧಕ್ಕೆಯುಂಟುಮಾಡಿದ್ದಾರೆ ಎಂಬುದು ನಿಜವಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *