Fact Check: ಪಾಕಿಸ್ತಾನದ ರಕ್ಷಣಾ ತಜ್ಞ ಜೈದ್ ಹಮೀದ್ ಅವರು ಗಜ್ವಾ-ಎ-ಹಿಂದ್ ಎಂಬ ಸಿದ್ದಾಂತವನ್ನು ಪ್ರತಿಪಾದಿಸುತ್ತಿರುವುದು ನಿಜ

ಪಾಕಿಸ್ತಾನ

ಇತ್ತೀಚೆಗೆ ಪಾಕಿಸ್ತಾನದ ರಕ್ಷಣಾ ತಜ್ಞ ಜೈದ್ ಹಮೀದ್ ಅವರು ಪ್ರಚೋದನಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ ಎಂಬ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಇದನ್ನು ಅನೇಕರು ಹಂಚಿಕೊಂಡು ಪಾಕಿಸ್ತಾನ ನಮ್ಮ ದೇಶದ ಮೇಲೆ ಯುದ್ದ ಮಾಡಲು ನಿರ್ಧರಿಸಿದೆ ಹಾಗೂ ಇದಕ್ಕೆ ಹಿಂದುಗಳು ಮತ್ತು ಭಾರತ ತಯಾರಾಗಿದೆಯೇ ಎಂದು ಕೇಳಿದ್ದಾರೆ ಎನ್ನಲಾಗುತ್ತಿದೆ.

ವೈರಲ್ ಪೋಸ್ಟ್‌ಗಳನ್ನು “ಪಾಕಿಸ್ತಾನದ ರಕ್ಷಣಾ ತಜ್ಞ ಜೈದ್ ಹಮೀದ್ ಅವರ ಪ್ರಚೋದನಕಾರಿ ಹೇಳಿಕೆ. ‘ಗಜ್ವಾ-ಎ-ಹಿಂದ್‌ನ ಭೀಕರ ಯುದ್ಧವು ಹಲವು ವರ್ಷಗಳವರೆಗೆ ಮುಂದುವರಿಯಲಿದೆ!’ ಈ ಯುದ್ದಕ್ಕೆ ಹಿಂದೂಗಳು ಮತ್ತು ಸರಕಾರ ಸಿದ್ಧವಾಗಿದೆಯೇ ? ಪಾಕಿಸ್ತಾನ ವಿನಾಶದ ಅಂಚಿನಲ್ಲಿದ್ದರೂ ಸಹ ‘ಜಿಹಾದ್’ ಬಿಡುತ್ತಿಲ್ಲ, ಆದರೆ ಹಿಂದೂಗಳು ಸಾಯುತ್ತಿದ್ದರೂ ಜಾಗೃತರಾಗುತ್ತಿಲ್ಲ! ಹಿಂದೂಗಳಿಗೆ ಇದು ನಾಚಿಕೆಗೇಡಿನ ವಿಷಯವಾಗಿದೆ !” ಎಂಬ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

ಅಂತಹ ಹೆಚ್ಚಿನ ಪೋಸ್ಟ್‌ಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ನಾವು ಜೈದ್ ಹಮೀದ್ ಈ ರೀತಿಯ ಹೇಳಿಕೆ ಕೊಟ್ಟಿರುವ ಕುರಿತು ಹುಡುಕಿದಾಗ ಅನೇಕ ವರದಿಗಳು ಲಭ್ಯವಾಗಿವೆ. ಆದರೆ ದೇಶದ ಪ್ರತಿಷ್ಠಿತ ಯಾವ ಮಾಧ್ಯಮಗಳು ಸಹ ಈ ಕುರಿತು ವರದಿ ಮಾಡಿಲ್ಲ.

ಜೈದ್ ಹಮೀದ್ ಅವರು ವಿವಾದಾತ್ಮಕ ವ್ಯಕ್ತಿಯಾಗಿದ್ದು ಭಾರತ ಮತ್ತು ಬಹುದೇವತಾರಾಧನೆಯನ್ನು ನಂಬುವ ಹಿಂದು ಧರ್ಮದವರ ಮೇಲೆ ಸದಾ ದ್ವೇಷ ಕಾರುತ್ತಿರುತ್ತಾರೆ ಎಂದು ಅವರ ಹಿಂದಿನ ವಿವಾದಾತ್ಮಕ ಹೇಳಿಕೆಗಳಿಂದ ತಿಳಿದು ಬಂದಿದೆ.

ಈ ಕುರಿತು ನವಭಾರತ್ ಟೈಮ್ಸ್‌ನವರು 20 ಜನವರಿ 2024ರಂದು ವರದಿಯೊಂದನ್ನು ಮಾಡಿದ್ದು “ಇರಾನ್ ಮಂಗಳವಾರ ಪಾಕಿಸ್ತಾನದ ಮೇಲೆ ಕ್ಷಿಪಣಿ ಮತ್ತು ಡ್ರೋನ್ ಗಳಿಂದ ದಾಳಿ ನಡೆಸಿದೆ. ಪಾಕಿಸ್ತಾನದಲ್ಲಿ ಈ ದಾಳಿಯನ್ನು ಯಾರೂ ನಿರೀಕ್ಷಿಸಿರಲಿಲ್ಲ. ಈ ದಾಳಿಯು ಪಾಕಿಸ್ತಾನದ ವಾಯು ರಕ್ಷಣೆಯನ್ನು ಬಹಿರಂಗಪಡಿಸಿದೆ. ಪಾಕಿಸ್ತಾನದಲ್ಲಿ ಲಾಲ್ ಕ್ಯಾಪ್ ಎಂದು ಜನಪ್ರಿಯವಾಗಿ ಕರೆಯಲ್ಪಡುವ ಜೈದ್ ಹಮೀದ್ ಇರಾನ್ ದಾಳಿಯನ್ನು ಅರ್ಥಹೀನ ದಾಳಿ ಎಂದು ಬಣ್ಣಿಸಿದ್ದಾರೆ. ಇದರೊಂದಿಗೆ, ಭಾರತದ ವಿರುದ್ಧ ವಿಷವನ್ನು ತೀವ್ರವಾಗಿ ಉಗುಳಲಾಯಿತು. ಪಾಕಿಸ್ತಾನವು ಯುದ್ಧ ಮಾಡಿದರೆ, ಇರಾನ್ನಿಂದ ಏನೂ ಉಳಿಯುವುದಿಲ್ಲ ಎಂದು ಜೈದ್ ಹಮೀದ್ ಬೆದರಿಕೆ ಹಾಕಿದ್ದಾರೆ.

“ನಾವು ಭಾರತದ ಭೂಪ್ರದೇಶವನ್ನು ಪ್ರವೇಶಿಸಿ ಕೊಂದರೆ ನಿಮಗೂ (ಇರಾನ್) ಸಮಸ್ಯೆಯಾಗುತ್ತದೆ. ಏಕೆಂದರೆ ಬಲೂಚಿಸ್ತಾನ್ ಲಿಬರೇಶನ್ ಆರ್ಮಿ ಮತ್ತು ಭಾರತ ಕೂಡ ಇರಾನ್ ನಲ್ಲಿವೆ. ನಾವು ಚಬಹಾರ್ ಅನ್ನು ಸ್ಫೋಟಿಸುತ್ತೇವೆ ಏಕೆಂದರೆ ಭಾರತವು ಬಂದರು ನಿರ್ಮಾಣದ ಹೆಸರಿನಲ್ಲಿ ಚಬಹಾರ್ನಲ್ಲಿ ಸಂಪೂರ್ಣ ಬೇಹುಗಾರಿಕೆ ಪ್ರಧಾನ ಕಚೇರಿಯನ್ನು ನಿರ್ಮಿಸಿದೆ”. ಎಂದು ವರದಿಯಲ್ಲಿ ತಿಳಿಸಿದ್ದಾರೆ.

ಆರ್‌ಎಸ್‌ಎಸ್‌ ಮೂಲದ  ಸನಾತನ ಪ್ರಭಾತದಲ್ಲಿ “‘ಗಜವಾ-ಎ-ಹಿಂದ್’ ಅನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಿ. ಇದು ಅತ್ಯಂತ ಭಯಾನಕ ಯುದ್ಧವಾಗಿದೆ. ಇದು ಹಲವು ವರ್ಷಗಳವರೆಗೆ ಮುಂದುವರಿಯಲಿದೆ. ಈ ಯುದ್ಧದಲ್ಲಿ ಭಾರತವು ಮುಸ್ಲಿಮರ ಕೈಗೆ ಒಮ್ಮೆ ಸಿಕ್ಕರೆ ಸಾಕು ಅದು ನಮ್ಮಲ್ಲಿಯೇ ಉಳಿಯಲಿದೆ ಎಂದು ಪಾಕಿಸ್ತಾನದ ತಥಾಕಥಿತ ರಕ್ಷಣಾ ತಜ್ಞ ಜೈದ್ ಹಮೀದ್ ಅವರು ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ.

ಈ ವೀಡಿಯೊದಲ್ಲಿ, ಝೈದ್ ಹಮೀದ್ ಹೇಳಿದ್ದು:

1. ಯಾರು ‘ಬುತಪರಸ್ತ’ (ವಿಗ್ರಹ ಆರಾಧಕರು) ಆಗಿದ್ದವರ ಕೊನೆಯ ತಲೆಮಾರಿನವರು ಈಗ ಭಾರತದಲ್ಲಿ ಮಾತ್ರ ಉಳಿದಿದ್ದಾರೆ. ಈ ಮುಸ್ಲಿಂ ಜಗತ್ತಿನಲ್ಲಿ ಭಾರತದಲ್ಲಿ ಕಾಣುವಷ್ಟು ‘ಮುಶ್ರಿಕ್’ಗಳನ್ನು (ಬಹುದೇವತಾವಾದಿಗಳು) ನೀವು ಬೇರೆ ಎಲ್ಲಿಯೂ ಕಾಣುವುದಿಲ್ಲ.

2. ಕಾಬಾದೊಳಗೆ ವಿಗ್ರಹಗಳನ್ನು ಇರಿಸಿದ್ದು ಇದೇ ಜಾತಿಯವರಾಗಿದ್ದಾರೆ. ಈಗ ಅದೇ ವಿಗ್ರಹ ಮತ್ತು ಅದರಂತಹ ಸಾವಿರಾರು ವಿಗ್ರಹಗಳನ್ನು ಮತ್ತು ದೇವರುಗಳನ್ನು ಭಾರತದಲ್ಲಿ ಇರಿಸಿದ್ದಾರೆ.
3. ಮತ್ತೊಮ್ಮೆ ಈ ಎಲ್ಲಾ ವಿಗ್ರಹಗಳು ಭಗ್ನಗೊಳ್ಳುವುದು. ಮಹ್ಮದ್ ಘಝನಿಯು ಸೋಮನಾಥ ಮತ್ತು ಇತರ ದೇವಾಲಯಗಳನ್ನು ಕೆಡವಿದ ರೀತಿಯಲ್ಲಿಯೇ ಎಲ್ಲಾ ದೇವಾಲಯಗಳನ್ನು ಕೆಡವಲಾಗುವುದು. ವಿಗ್ರಹ ಆರಾಧನೆ ಸಂಪೂರ್ಣವಾಗಿ ಕಣ್ಮರೆಯಾಗುವುದು. ಸ್ವಾಭಾವಿಕವಾಗಿ, ಈ ಯುದ್ಧವು ಭಯಾನಕವಾಗಿರುತ್ತದೆ. ಇದು ಒಂದು ದಿನದ ಯುದ್ಧವಲ್ಲ.” ಎಂದು ಹೇಳಿದ್ದಾರೆ ಎನ್ನಲಾಗಿದೆ.

ಆದರೆ ಕೆಲವೊಮ್ಮೆ ಸನಾತನ ಪ್ರಭಾದವರ ವರದಿ ಕೋಮುವಾದಿ ದೃಷ್ಠಿಕೋನವನ್ನು ಹೊಂದಿರುವ ಕಾರಣಕ್ಕಾಗಿ ಈ ವರದಿಯನ್ನು ನಾವು ಸಂಪೂರ್ಣವಾಗಿ ನಂಬದೇ ಸನಾತನ ಪ್ರಭಾದಲ್ಲಿ ಹಂಚಿಕೊಂಡಿರುವ ವೀಡಿಯೋ ತುಣುಕನ್ನು ಬಳಸಿಕೊಂಡು ಮೂಲ ವೀಡಿಯೋವಿಗಾಗಿ ರಿವರ್ಸ್‌ ಇಮೇಜ್‌ ಸರ್ಚ್‌ನಲ್ಲಿ ಹುಡುಕಿದಾಗ ಯೂಟೂಬಿನಲ್ಲಿ ಜೈದ್ ಹಮೀದ್ ಅವರ ಮೂಲ ಸಂದರ್ಶನ ಧೀರ್ಘಾವಧಿಯ ಅನೇಕ ವೀಡಿಯೋ ಲಭ್ಯವಾಗಿದೆ. ಆದರೆ ವೈರಲ್ ಆಗಿರುವ ತುಣುಕು ಯಾವ ವೀಡಿಯೋ ಮತ್ತು ಸಂದರ್ಭದಲ್ಲಿ ನೀಡಿರುವ ಹೇಳಿಕೆ ಎಂದು ನಮಗೆ ಕಂಡುಹಿಡಿಯಲು ಸಾಧ್ಯವಾಗಿಲ್ಲ. ಇನ್ನಷ್ಟು ಸಂಶೋಧನೆಯ ಮೂಲಕ ಅಗತ್ಯ ಮಾಹಿತಿಗಳೊಂದಿಗೆ ಈ ಲೇಖನವನ್ನು ವಿಸ್ತರಿಸಲಾಗುವುದು.

ನಾವು ಯೂಟೂಬಿನಲ್ಲಿ ಜೈದ್ ಹಮೀದ್ ಅವರ ಅನೇಕ ವೀಡಿಯೋಗಳನ್ನು ವೀಕ್ಷಿಸಿದ್ದು “ಇಂಡಿಯಾ VS ಪಾಕಿಸ್ತಾನ, ಮೋದಿ ಪಾಕಿಸ್ತಾನದ ಮೇಲೆ ಮತ್ತೊಂದು ದಾಳಿ ಮಾಡಲು ಏಕೆ ಪ್ರಯತ್ನಿಸುತ್ತಾರೆ?” ಎಂಬ  ವೀಡಿಯೋದಲ್ಲಿ “ಪ್ರಜಾಪ್ರಭುತ್ವದಿಂದ ಆಯ್ಕೆಯಾಗಿ ಬಂದ ನರೇಂದ್ರ ಮೋದಿ ಈಗ ಸರ್ವಾಧಿಕಾರಿಯಾಗಿ ಬದಲಾಗಿದ್ದಾರೆ, ಫ್ಯಾಸಿಸಂ(ಕೋಮುವಾದ) ಬಿತ್ತುತ್ತ ಹಿಂದು ರಾಷ್ಟ್ರ ಮಾಡುವ ಸಲುವಾಗಿ ಹೊರಟಿದ್ದಾರೆ. ತಮ್ಮ ಗಡಿಗಳನ್ನು ವಿಸ್ತರಿಸುವುದು ಎಲ್ಲಾ ಸರ್ವಾಧಿಕಾರಿಗಳ ಗುರಿಯಾಗಿರುತ್ತದೆ. ಹಾಗಾಗಿ ಮುಂಬರುವ ದಿನಗಳಲ್ಲಿ ಮೋದಿ ಪಾಕಿಸ್ತಾನದ ಮೇಲೆ ದಾಳಿ ಮಾಡಿಸುವ ಸಾಧ್ಯತೆಯಿದೆ. ಪಾಕಿಸ್ತಾನ ಇದನ್ನು ಎದುರಿಸಲು ತಯಾರಾಗಿರಬೇಕು ಎಂದು ಹೇಳಿದ್ದಾರೆ.

ಹಾಗೆಯೇ ಜೈದ್ ಹಮೀದ್  ಅವರು “ಗಜ್ವಾ-ಎ-ಹಿಂದ್” ಎಂಬ ಪಿತೂರಿ ಸಿದ್ಧಾಂತವನ್ನು ಪ್ರತಿಪಾದಿಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ. ಪಾಕಿಸ್ತಾನದ ಅನೇಕರು ಈ ಜೈದ್‌ ಹಮೀದ್ ಅವರ ಈ ವಾದವನ್ನು ಒಪ್ಪಿದರೆ ಇನ್ನೂ ಅನೇಕ ಪಾಕಿಸ್ತಾನಿಗಳು ಇವರ ವಾದವನ್ನು ತಿರಸ್ಕರಿಸಿಸುತ್ತಿದ್ದಾರೆ.

ಗಝ್ವಾ-ಎ-ಹಿಂದ್ ಕುರಿತು:

ಪಾಕಿಸ್ತಾನದ ಉಗ್ರಗಾಮಿ ನಾಯಕರು ದಶಕಗಳಿಂದ ಭಾರತದ ವಿರುದ್ಧ ಬಳಸುತ್ತಿರುವ ಒಂದು ನುಡಿಗಟ್ಟು ಇದಾಗಿದೆ – ಗಝ್ವಾ-ಎ-ಹಿಂದ್ ಅಥವಾ ಭಾರತದ ಪವಿತ್ರ ದಾಳಿ. ಅರೇಬಿಕ್ ಭಾಷೆಯಲ್ಲಿ ಗಝ್ವಾ ಎಂದರೆ ಭೌತಿಕ ಅಥವಾ ಪ್ರಾದೇಶಿಕ ಲಾಭಗಳಿಗಿಂತ ಹೆಚ್ಚಾಗಿ ನಂಬಿಕೆಯಿಂದ ನಿರ್ದೇಶಿಸಲ್ಪಟ್ಟ ಯುದ್ಧವನ್ನು ಸೂಚಿಸುತ್ತದೆ ಮತ್ತು ಇದು ಹದೀಸ್‌ಗಳಿಂದ ಪಡೆದ ಇಸ್ಲಾಮಿಕ್ ಪರಿಕಲ್ಪನೆಗೆ ವ್ಯಾಪಕವಾಗಿ ಕಾರಣವಾಗಿದೆ – ಇದು ಪ್ರವಾದಿ ಮೊಹಮ್ಮದ್ ಅವರ ಮಾತುಗಳ ಒಂದು ಗುಂಪು. ಈ ಪದಗುಚ್ಛವನ್ನು ಭಾರತೀಯ ಉಪಖಂಡವನ್ನು ಗೆದ್ದ ಮುಸ್ಲಿಂ ಯೋಧರನ್ನು ಉಲ್ಲೇಖಿಸಲು ಬಳಸಲಾಗುತ್ತದೆ.

ಆದಾಗಿಯೂ ಗಝ್ವಾ-ಎ-ಹಿಂದ್ ಪರಿಕಲ್ಪನೆಯ ಬಗ್ಗೆ ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನಿಸುತ್ತಾರೆ. ಪಾಕಿಸ್ತಾನ ಅನೇಕ ಸಂದರ್ಭದಲ್ಲಿ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿದೆ ಎಂದು ಜಮಿಯತ್ ವಿದ್ವಾಂಸ ಮೌಲಾನಾ ಮುಫ್ತಿ ಸಲ್ಮಾನ್ ಮನ್ಸೂರ್ಪುರಿ ಅವರು ಹೇಳಿದ್ದಾರೆ.


ಇದನ್ನು ಓದಿ: ಬೈಕ್ ಗ್ಯಾಂಗ್‌ನಿಂದ ಕಿರುಕುಳ ಪ್ರಕರಣಕ್ಕೆ ತಿರುವು: ಮೂವರು ಯುವಕರು ತನಗೆ ಸಹಾಯ ಮಾಡುತ್ತಿದ್ದರು ಎಂದ ಯುವತಿ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *