Fact Check | ಇದು ಬಾಂಗ್ಲಾದ ಹಿಂದೂಗಳ ರ್ಯಾಲಿ ಅಲ್ಲ, ಬದಲಿಗೆ ಛಾತ್ರಾ ಲೀಗ್‌ ರ್ಯಾಲಿ

“ಬಾಂಗ್ಲಾದೇಶದಲ್ಲಿ ಅಲ್ಲಿನ ಪ್ರಧಾನಿ ಪಲಾಯನಗೈದ ನಂತರ ಮುಸಲ್ಮಾನರು ಹಿಂದೂಗಳ ಮೇಲೆ ವ್ಯಾಪಕವಾಗಿ ದಾಳಿ ನಡೆಸುತ್ತಿದ್ದಾರೆ. ಇದು ಹಿಂದೂ ಸಮುದಾಯವನ್ನು ಬಾಂಗ್ಲಾದಿಂದ ಓಡಿಸುವ ಮತ್ತು ಹಿಂದೂಗಳನ್ನು ಹತ್ತಿಕ್ಕುವ ಕೆಲಸವಾಗಿದೆ. ಇದರ ವಿರುದ್ಧ ಇದೀಗ ಹಿಂದೂಗಳು ಒಗ್ಗಾಟ್ಟಾಗಿ ಬಹುದೊಡ್ಡ ಮೆರವಣಿಗೆಯನ್ನೇ ಮಾಡಿದ್ದಾರೆ. ನಿಜ ಹೇಳಬೇಕೆಂದರೆ ಬಾಂಗ್ಲಾದಲ್ಲಿ ಕೇಸರಿ ಅಲೆಯೇ ಎದ್ದಿದೆ” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ.

ಇದರ ಜೊತೆಗೆ ಇನ್ನೂ ಹಲವರು ಭಾರತದಲ್ಲಿರುವ ಹಿಂದೂಗಳನ್ನು ಕೂಡ ಪ್ರಶ್ನಿಸಿದ್ದು, “ಭಾರತದಲ್ಲಿನ ಹಿಂದೂಗಳು ಎಚ್ಚೆತ್ತುಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಭಾರತದ ಹಿಂದೂಗಳು ಕೂಡ ನಮ್ಮನ್ನು ರಕ್ಷಿಸಿ ಎಂದು ಬೀದಿಗಿಳಿಯಬೇಕಾಗುತ್ತದೆ.” ಎಂದು ಬರೆಯಲಾದ ಟಿಪ್ಪಣಿಯೊಂದಿಗೆ ವಿಡಿಯೋವೊಂದನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಹೀಗೆ ಹಲವು ಬರಹಗಳೊಂದಿಗೆ ಹಂಚಿಕೊಳ್ಳಲಾಗುತ್ತಿರುವ ಈ ವಿಡಿಯೋದ ಅಸಲಿಯತ್ತು ಏನು ಹಾಗೂ ವಿಡಿಯೋದಲ್ಲಿ ಉಲ್ಲೇಖಿಸಿರುವ ಅಂಶ ಎಷ್ಟು ನಿಜ ಎಂಬುದನ್ನು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ವೈರಲ್‌ ವಿಡಿಯೋ ಕುರಿತು ಪರಿಶೀಲನೆ ನಡೆಸಲು ನಮ್ಮ ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ವಿಡಿಯೋದ ವಿವಿಧ ಕೀ ಫ್ರೇಮ್‌ಗಳನ್ನು ಬಳಸಿ ನಾವು ಗೂಗಲ್‌ ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲನೆ ನಡೆಸಿದ್ದೆವು. ಈ ವೇಳೆ ನಮಗೆ 02 ಸೆಪ್ಟೆಂಬರ್ 2023 ರಂದು ಅವಾಮಿ ಲೀಗ್ ನಾಯಕ ಮತ್ತು ಮಾಜಿ ಸಂಸದ ಶೇಖ್ ತನ್ಮೋಯ್ ಅವರ ಅಧಿಕೃತ ಇನ್‌ಸ್ಟಾಗ್ರಾಮ್‌ ಪೋಸ್ಟ್‌ವೊಂದು ಕಂಡು ಬಂದಿದ್ದು ಅದರಲ್ಲಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಮಾಹಿತಿ ಲಭ್ಯವಾಗಿದೆ.

ಈ ಪೋಸ್ಟ್‌ನ ಕೀಫ್ರೇಮ್‌ಗಳಲ್ಲಿ ಒಂದನ್ನು ಒಳಗೊಂಡಿರುವ ಫೋಟೋವಿದೆ. ಪೋಸ್ಟ್ ಪ್ರಕಾರ, ಈ ದೃಶ್ಯಗಳು ಸುಹ್ರವರ್ದಿ ಉದ್ಯಾನವನದಲ್ಲಿ ಬಾಂಗ್ಲಾದೇಶ ಛಾತ್ರ ಲೀಗ್ ಆಯೋಜಿಸಿದ್ದ ವಿದ್ಯಾರ್ಥಿ ಕೂಟವನ್ನು ತೋರಿಸುತ್ತವೆ, ಅಲ್ಲಿ ಶೇಖ್ ಹಸೀನಾ ಮುಖ್ಯ ಅತಿಥಿಯಾಗಿದ್ದರು. 01 ಸೆಪ್ಟೆಂಬರ್ 2023 ರಂದು ಬಾಂಗ್ಲಾದೇಶ ಛಾತ್ರ ಲೀಗ್‌ನ ನೆಟ್ರೊಕೋನಾ ಜಿಲ್ಲಾ ಘಟಕದ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿರುವ ರ್ಯಾಲಿಯ ಒಂದೇ ರೀತಿಯ ದೃಶ್ಯಗಳೊಂದಿಗೆ ಹೆಚ್ಚಿನ ಫೋಟೋಗಳನ್ನು ನಾವು ಕಂಡುಕೊಂಡಿದ್ದೇವೆ. ಶೀರ್ಷಿಕೆಯ ಪ್ರಕಾರ, ಈ ಕಾರ್ಯಕ್ರಮವನ್ನು ಬಾಂಗ್ಲಾದೇಶ ಛತ್ರ ಲೀಗ್ (BCL) ಆಯೋಜಿಸಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ‘ಅನಾರುಲ್ ಇಸ್ಲಾಂ’ ಎಂದು ಬರೆದಿರುವುದನ್ನು ನೋಡಬಹುದು. ಇದನ್ನು ಕ್ಯೂ ಆಗಿ ತೆಗೆದುಕೊಂಡು ಮತ್ತಷ್ಟು ಹುಡುಕಿದಾಗ, ಅದೇ ವೈರಲ್ ವೀಡಿಯೊವನ್ನು 02 ಸೆಪ್ಟೆಂಬರ್ 2023 ರಂದು ‘ಅನಾರುಲ್ ಇಸ್ಲಾಂ’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು ನಾವು ಕಂಡುಕೊಂಡಿದ್ದೇವೆ. ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ ಇದು ಬಾಂಗ್ಲಾದೇಶದಲ್ಲಿ ನಡೆದಿರುವ ಹಿಂದೂಗಳ ಪ್ರತಿಭಟನೆ ಎಂಬುದಕ್ಕೆ ಯಾವುದೇ ಸಾಕ್ಷಿಗಳು ಇಲ್ಲ ಎಂಬುದು ಸಾಬೀತಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಬಾಂಗ್ಲಾದೇಶದಲ್ಲಿ ನಡೆದ ಛಾತ್ರ ಲೀಗ್ ರ್ಯಾಲಿಯ ಹಳೆಯ ವೀಡಿಯೊವನ್ನು 2024 ರಲ್ಲಿ ನಡೆಯುತ್ತಿರುವ ಗಲಭೆಗೆ ಸಂಬಂಧಿಸಿದಂತೆ ಹಂಚಿಕೊಳ್ಳಲಾಗುತ್ತಿದೆ. ಒಂದು ವೇಳೆ ಹಿಂದೂಗಳು ಬೃಹತ್‌ ಸಂಖ್ಯೆಯಲ್ಲಿ ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸಿದ್ದು ನಿಜವೇ ಆಗಿದ್ದರೆ ಅಧಿಕೃತವಾದ ವರದಿಗಳು ಕಂಡು ಬರಬೇಕಿತ್ತು, ಆದರೆ ಆ ರೀತಿಯ ಯಾವುದೇ ವರದಿಗಳು ಕಂಡು ಬಂದಿಲ್ಲ. ಹಿಂದೂಗಳ ಪ್ರತಿಭಟನೆಗೆ ಸಂಬಂಧ ಪಟ್ಟಂತೆ ಯಾವುದೇ ಅಧಿಕೃತ ಮಾಹಿತಿ ಅಲ್ಲಿನ ಹಂಗಾಮಿ ಸರ್ಕಾರದಿಂದಲೂ ಲಭ್ಯವಾಗಿಲ್ಲ. ಹಾಗಾಗಿ ವೈರಲ್‌ ವಿಡಿಯೋ ಸಂಪೂರ್ಣವಾಗಿ ಸುಳ್ಳಿನಿಂದ ಕೂಡಿದೆ.


ಇದನ್ನೂ ಓದಿ : Fact Check | ಬಾಂಗ್ಲಾದೇಶದ ಕೈದಿಗಳ ಅವಶೇಷಗಳು ಎಂದು ಫ್ರಾನ್ಸ್‌ನ ಫೋಟೋ ಹಂಚಿಕೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *