Fact Check | ದೆಹಲಿಯಲ್ಲಿ ‘ರಾಮ್ ಕಚೋರಿ’ ಎಂಬ ಹೆಸರಿನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬರು ಅಂಗಡಿ ನಡೆಸುತ್ತಿದ್ದಾರೆ ಎಂಬುದು ಸುಳ್ಳು

“ಕೇಸರಿ ಸ್ಕಾರ್ಫ್‌ಗಳನ್ನು ಧರಿಸಿ, ಕೇಸರಿ ಧ್ವಜವನ್ನು ಹಿಡಿದುಕೊಂಡು ಅಂಗಡಿಯ ಮುಂದೆ ಗುಂಪೊಂದು ಪ್ರತಿಭಟನೆ ನಡೆಸಿದೆ. ಈ ಪ್ರತಿಭಟನೆಗೆ ಕಾರಣ ಮುಸ್ಲಿಂ ವ್ಯಕ್ತಿಯೊಬ್ಬ ರಾಮ್ ಕಚೋರಿ ಎಂಬ ಹೆಸರಿನಲ್ಲಿ ಅಂಗಡಿಯನ್ನು ಹೊಂದಿದ್ದು, ದೆಹಲಿಯ ಯಮುನಾ ಬಜಾರ್‌ನಲ್ಲಿರುವ ದೇವಾಲಯದ ಬಳಿ ಈ ಅಂಗಡಿ ಇದ್ದು,  ಇದರ ಮಾಲೀಕ ನಿಯಾಜ್ ಖಾನ್ ಎಂದು ತಿಳಿದುಬಂದಿದೆ. ಇಷ್ಟೇ ಆಗಿದ್ದರೆ ಏನು ಆಗುತ್ತಿರಲಿಲ್ಲ.! ಆದರೆ ದೇವಾಲಯದ ಸಂಕೀರ್ಣದಲ್ಲಿ ಮಟನ್ ಕುರ್ಮವನ್ನು ಆರ್ಡರ್ ಮಾಡಿದ್ದಾರೆ.” ಎಂದು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಲಾಗುತ್ತಿದೆ.

ಈ ವಿಡಿಯೋದಲ್ಲಿ ಹಲವು ಮಂದಿ ಕೇಸರಿ ಧ್ವಜವನ್ನು ಹಿಡಿದು ಪ್ರತಿಭಟಿಸುವುದನ್ನು ನೋಡಬಹುದಾಗಿದ್ದು, ಪೊಲೀಸರು ಕೂಡ ಈ ಪ್ರತಿಭಟನೆಯನ್ನು ನಿಯಂತ್ರಿಸುತ್ತಿರುವುದನ್ನು ಕಾಣಬಹುದಾಗಿದೆ. ವಿಡಿಯೋದ ಟಿಪ್ಪಣಿಯಲ್ಲಿನ ಅಂಶ ನಿಜವೆಂದು ವೈರಲ್ ವಿಡಿಯೋವನ್ನು ಸಾಮಾಜಿಕ ಜಾಲತಾಣದ ಬಳಕೆದಾರರು ಹಂಚಿಕೊಳ್ಳುತ್ತಿದ್ದಾರೆ

ಫ್ಯಾಕ್ಟ್‌ಚೆಕ್

ವೈರಲ್ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಾಗಿ ಹಂಚಿಕೊಳ್ಳುತ್ತಿರುವುದನ್ನು ಕಂಡ ನಮ್ಮ ಕನ್ನಡ ಫ್ಯಾಕ್ಟ್‌ಚೆಕ್ ತಂಡ ಈ ಕುರಿತು ಸತ್ಯಶೋಧನೆಯನ್ನು ನಡೆಸಲು ಮುಂದಾಯಿತು. ಇದಕ್ಕಾಗಿ ವೈರಲ್ ವಿಡಿಯೋಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್‌ಗಳನ್ನು ಬಳಸಿ ಹುಡುಕಾಟವನ್ನು ನಡೆಸಿತು. ಈ ವೇಳೆ  ವೈರಲ್‌ ವಿಡಿಯೋಗೆ ಸಂಬಂಧಿಸಿದಂತೆ, ನಮಗೆ 2023ರಲ್ಲಿ ಪ್ರಕಟವಾದ ಹಲವಾರು  ವರದಿಗಳು ಕಂಡು ಬಂದವು.

ಈ ವರದಿಗಳ ಪ್ರಕಾರ, ದೆಹಲಿಯ ಯಮುನಾ ಬಜಾರ್, ಕಾಶ್ಮೀರ್ ಗೇಟ್‌ನಲ್ಲಿರುವ ಹನುಮಾನ್ ಮಂದಿರದ ಆವರಣದಲ್ಲಿ ‘ರಾಮ್ ಕಚೋರಿ’ ಅಂಗಡಿ ಇದೆ ಮತ್ತು ಈ ಅಂಗಡಿಯ ಮಾಲೀಕರು ಹಿಂದೂ. ಅಂಗಡಿಯವನ ಮಗ ಅಭಿಷೇಕ್ ಶರ್ಮಾ 01 ಮಾರ್ಚ್ 2023 ರಂದು ಸ್ವಿಗ್ಗಿಯಿಂದ ಮಟನ್ ಕುರ್ಮಾವನ್ನು ಆರ್ಡರ್ ಮಾಡಿದ್ದಾರೆ ಎಂದು ವರದಿಗಳು ಹೇಳುತ್ತವೆ. ಸ್ವಿಗ್ಗಿ ಡೆಲಿವರಿ ಬಾಯ್‌ ಸಚಿನ್ ಪಾಂಚಾಲ್ ಅವರು ಮಟನ್ ಕೊರ್ಮಾ ಆರ್ಡರ್ ಅನ್ನು ತಲುಪಿಸಲು ನಿರಾಕರಿಸಿದ್ದಾರೆ. ಕಾರಣ ಡೆಲಿವರಿ ವಿಳಾಸವು ಮಾರ್ಗಟ್ ಹನುಮಾನ್ ಮಂದಿರದ ಆವರಣದಲ್ಲಿದೆ ಎಂದು ಉಲ್ಲೇಖಿಸಲಾಗಿದೆ.

ಈ ಘಟನೆಯ ಬಗ್ಗೆ ತಿಳಿದ ಹಲವಾರು ಹಿಂದೂ ಸಂಘಟನೆಗಳು ಸ್ಥಳದಲ್ಲಿ ಜಮಾಯಿಸಿ ದೇವಸ್ಥಾನದ ಆವರಣಕ್ಕೆ ಮಾಂಸಾಹಾರವನ್ನು ಆರ್ಡರ್ ಮಾಡಿದ್ದಕ್ಕಾಗಿ ಅಂಗಡಿಯ ವಿರುದ್ಧ ಪ್ರತಿಭಟಿಸಿದವು ಎಂದು ವರದಿಗಳು ತಿಳಿಸಿವೆ. ಇದರ ಬೆನ್ನಲ್ಲೇ, ಪುರಾತನ ಹನುಮಾನ್ ಮಂದಿರದ ಪಕ್ಕದಲ್ಲಿರುವ ರಾಮ್ ಕಚೋರಿ ಅಂಗಡಿಯ ಬಳಿ ಭಾರೀ ಸಿಆರ್‌ಪಿಎಫ್ ಮತ್ತು ದೆಹಲಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ದೇವಾಲಯದ ಆವರಣಕ್ಕೆ ಮಟನ್‌ ಕುರ್ಮಾವನ್ನು ತಲುಪಿಸಲು ನಿರಾಕರಿಸಿದ ಸ್ವಿಗ್ಗಿ ಡೆಲಿವರಿ ಪಾಲುದಾರ, ಸಚಿನ್ ಪಾಂಚಾಲ್ ಅವರನ್ನು ಪವಿತ್ರ ದೇಗುಲದ ಧಾರ್ಮಿಕ ಪಾವಿತ್ರ್ಯತೆಯನ್ನು ಎತ್ತಿ ಹಿಡಿದಿದ್ದಕ್ಕಾಗಿ ಮಾರ್ಗಟ್ ಹನುಮಾನ್ ಮಂದಿರದ ದೇವಸ್ಥಾನ ಮಂಡಳಿಯಿಂದ ಸನ್ಮಾನಿಸಲಾಯಿತು.

ಒಟ್ಟಾರೆಯಾಗಿ ಹೇಳುವುದಾದರೆ, ದೆಹಲಿಯ ಯಮುನಾ ಬಜಾರ್‌ನಲ್ಲಿರುವ ಮಾರ್ಗಟ್ ಹನುಮಾನ್ ಮಂದಿರದ ಬಳಿ ಇರುವ ‘ರಾಮ್ ಕಚೋರಿ’ ಅಂಗಡಿಯ ಮಾಲೀಕರು ಹಿಂದೂವಾಗಿದ್ದು, ಮುಸ್ಲಿಂ ವ್ಯಕ್ತಿಯೇ ಮಾಲೀಕ ಎಂಬುದು ಸುಳ್ಳಾಗಿದೆ. ಹಾಗಾಗಿ ಇಂತಹ ಸುಳ್ಳು ಮಾಹಿತಿ ಹೊಂದಿರುವ ವಿಡಿಯೋಗಳನ್ನು ಹಂಚಿಕೊಳ್ಳಬೇಡಿ..


ಇದನ್ನೂ ಓದಿ : Fact Check: ಪಶ್ಚಿಮ ಬಂಗಾಳದಲ್ಲಿ ಮಹಿಳೆ ಮೇಲೆ ಹಲ್ಲೆ: ಸುಳ್ಳು ಕೋಮು ಆರೋಪದೊಂದಿಗೆ ಹಂಚಿಕೊಳ್ಳಲಾಗುತ್ತಿದೆ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *