Fact Check: ಮುಂಬೈನ ಮೊಹರಂ ಮೆರವಣಿಗೆಯಲ್ಲಿ ಕುದುರೆಗೆ ಘಾಸಿಗೊಳಿಸಿದ್ದಾರೆ ಎಂದು ಬಣ್ಣ ಮತ್ತು ಸ್ಟಿಕ್ಕರ್ ಅಂಟಿಸಿದ ಕುದುರೆ ವೀಡಿಯೋ ವೈರಲ್ ಆಗಿದೆ

ಮೊಹರಂ

ನೆನ್ನೆಯಷ್ಟೇ ಮೊಹರಂ ಹಬ್ಬವನ್ನು ಕರ್ನಾಟಕದಲ್ಲಿ ಹಿಂದು-ಮುಸ್ಲಿಮರು ಭಾವೈಕ್ಯತೆಯಿಂದ ಆಚರಿಸಿದ್ದಾರೆ. ಜಗತ್ತಿನಾದ್ಯಂತ ಮೊಹರಂ ಹಬ್ಬವನ್ನು ಶಿಯಾ ಮತ್ತು ಸುನ್ನಿ ಮುಸ್ಲಿಮರು ಆಚರಿಸಿದ್ದಾರೆ.

ಮುಹರಂ ಇಸ್ಲಾಮಿಕ್ ಕ್ಯಾಲೆಂಡರ್‌ನ ಮೊದಲ ತಿಂಗಳಾಗಿದ್ದು, ಯುದ್ಧವನ್ನು ನಿಷೇಧಿಸಿದಾಗ ಇದು ವರ್ಷದ ನಾಲ್ಕು ಪವಿತ್ರ ತಿಂಗಳುಗಳಲ್ಲಿ ಒಂದಾಗಿದೆ. ಇದು ಸಫರ್ ತಿಂಗಳಿಗೆ ಮುಂಚಿತವಾಗಿರುತ್ತದೆ. ಮೊಹರಂನ ಹತ್ತನೆಯ ದಿನವನ್ನು ಅಶುರಾ ಎಂದು ಕರೆಯಲಾಗುತ್ತದೆ, ಇದು ಪ್ರಮುಖವಾಗಿ ಸುನ್ನಿ ಮುಸ್ಲಿಮರಿಗೆ ಇಸ್ಲಾಂನಲ್ಲಿ ಪ್ರಮುಖ ಸ್ಮರಣಾರ್ಥ ದಿನವಾಗಿದೆ. ಈ ದಿನದಂದು ಪ್ರವಾದಿ ಮೋಸೆಸ್ ಕೆಂಪು ಸಮುದ್ರವನ್ನು ವಿಭಜನೆ ಮಾಡಿದ ಮತ್ತು ಇಸ್ರೇಲೀಯರಿಗೆ ಮೋಕ್ಷ ದೊರಕಿಸಿದ ಎಂದು ನಂಬಲಾಗುತ್ತದೆ, ಇದನ್ನು ಉಪವಾಸ ಮತ್ತು ಇತರ ಸ್ವೀಕಾರಾರ್ಹ ಸಂತೋಷದ ಅಭಿವ್ಯಕ್ತಿಗಳ ಮೂಲಕ ಆಚರಿಸಲಾಗುತ್ತದೆ.

ಇದಕ್ಕೆ ವ್ಯತಿರಿಕ್ತವಾಗಿ, ಅಶುರಾ ಶಿಯಾ ಮುಸ್ಲಿಮರಿಗೆ ಶೋಕಾಚರಣೆಯ ದಿನವಾಗಿದೆ, ಅವರು ಇಸ್ಲಾಮಿಕ್ ಪ್ರವಾದಿ ಮುಹಮ್ಮದ್ ಅವರ ಮೊಮ್ಮಗ ಮತ್ತು ಮೂರನೇ ಶಿಯಾ ಇಮಾಮ್ ಹುಸೇನ್ ಇಬ್ನ್ ಅಲಿ ಅವರ ಮರಣವನ್ನು ವಾರ್ಷಿಕವಾಗಿ ಸ್ಮರಿಸುತ್ತಾರೆ. 680 CE ನಲ್ಲಿ ಉಮಯ್ಯದ್ ಖಲೀಫ್ ಯಾಜಿದ್ ಇಬ್ನ್ ಮುಆವಿಯಾ (r. 680-683) ಸೈನ್ಯದ ವಿರುದ್ಧ ಕರ್ಬಲಾ ಕದನದಲ್ಲಿ ಹುಸೇನ್ ಅವನ ಹೆಚ್ಚಿನ ಸಂಬಂಧಿಕರು ಮತ್ತು ಅವನ ಸಣ್ಣ ಪರಿವಾರದ ಜೊತೆಗೆ ಕೊಲ್ಲಲ್ಪಟ್ಟರು. ಈ ತ್ಯಾಗ-ಬಲಿದಾನದ ನೆನಪಿಗೆ ಶಿಯಾ ಮುಸ್ಲಿಮರು ಮೊಹರಂ ಆಚರಿಸುತ್ತಾರೆ. 

ಆದರೆ, ನೆನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ “ಭಾರತದಲ್ಲಿ ಅಶುರಾ… ಈ ವರ್ಷ, ಮುಂಬೈನ ಬೀದಿಗಳಲ್ಲಿ, ಮುಸ್ಲಿಮರು ಭಯಭೀತ, ಮುಗ್ಧ ಕುದುರೆಯನ್ನು ತೆಗೆದುಕೊಂಡು, ಅದನ್ನು ಚಾಕುವಿನಿಂದ ಪದೇ ಪದೇ ಕಡಿದು, ರಕ್ತಸಿಕ್ತ, ಗಾಯಗೊಂಡ ಪ್ರಾಣಿಯನ್ನು ಪ್ರವಾದಿಯವರ ಮೊಮ್ಮಗನ ಮರಣದ ಸ್ಮರಣಾರ್ಥವಾಗಿ ಮೆರವಣಿಗೆ ಮಾಡುತ್ತಾರೆ. ಈ ಮನೋರೋಗಿಗಳು ತಮ್ಮನ್ನು ತಾವೇ ಕಡಿದು ಹೊಡೆಯುವುದರಲ್ಲಿ ಬೇಸತ್ತಿದ್ದಾರೆ ಮತ್ತು ಬದಲಿಗೆ ಮುಗ್ಧ ಪ್ರಾಣಿಯನ್ನು ಗುರಿಯಾಗಿಸಲು ನಿರ್ಧರಿಸಿದ್ದಾರೆ. ಇದನ್ನು ಹೇಗೆ ಅನುಮತಿಸಲಾಗಿದೆ?” ಎಂಬ ಶೀರ್ಷಿಕೆಯೊಂದಿಗೆ ಅನೇಕರು ಹಂಚಿಕೊಂಡಿದ್ದಾರೆ.

ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಫ್ಯಾಕ್ಟ್‌ ಚೆಕ್:

ವೈರಲ್ ಆಗುತ್ತಿರುವ ಮೊಹರಂ ಕುದುರೆ ಮೆರವಣಿಗೆಯ ದೃಶ್ಯವು ಮುಂಬೈನದ್ದಾಗಿದೆ. ನಾವು ವೈರಲ್ ವೀಡಿಯೋದ ಚಿತ್ರಗಳನ್ನು ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟ ನಡೆಸಿದಾಗ ಇದರ ಮೂಲ ವೀಡಿಯೋ ದೊರಕಿದ್ದು, ಶಿಯಾ ಏಜೆನ್ಸಿ ಎಂಬ ಯೂಟೂಬ್‌ ಚಾನೆಲ್‌ ನಲ್ಲಿ ಇದನ್ನು ಹಂಚಿಕೊಳ್ಳಲಾಗಿದೆ ಮತ್ತು ವೀಡಿಯೋವಿಗೆ ” 8ನೇ ಮೊಹರಂ 2024 ಗಷ್ಟ್ ಜೂಲೂಸ್ ಜುಲ್ಜಾನಾ | ಕೇಸರ್ ಬಾಗ್ ಮುಂಬೈ ಜೂಲೂಸ್ | ಅಜಾದಾರಿ ಮುಂಬೈ 2024″ ಎಂದು ಶೀರ್ಷಿಕೆ ನೀಡಲಾಗಿದೆ. 

ಈ ಚಾನೆಲ್‌ನಲ್ಲಿ ನೆನ್ನೆ ನಡೆದ ಮೊಹರಂ ಆಚರಣೆಯ ಎಲ್ಲಾ ವಿಡಿಯೋಗಳು ಲಭ್ಯವಿದ್ದು ಮೊದಲಿಗೆ ನೀಡಲಾಗಿರುವ ವೀಡಿಯೋದಲ್ಲಿ ಕುದುರೆಗೆ ಯಾವ ಬಣ್ಣ ಬಳಿಯದಿರುವುದು ಕಾಣುತ್ತದೆ. ಆದರೆ ಈ ಕೆಳಗಿನ ವೀಡಿಯೋದಲ್ಲಿ ಕುದುರೆಗೆ ಗಾಯಗಳಾಗಿರುವಂತೆ ಬಣ್ಣ ಮತ್ತು ಸ್ಟಿಕ್ಕರ್ ಅಂಟಿಸಿರುವುದನ್ನು ಗಮನಿಸಬಹುದು.

ಆಲ್ಟ್‌ ನ್ಯೂಸ್‌ ವರದಿಗಾರ ಮಹಮ್ಮದ್ ಜುಬೈರ್ ಅವರು ಸಹ ವೈರಲ್ ವೀಡಿಯೋದ ಕುರಿತು ಸ್ಪಷ್ಟನೆ ನೀಡಿ ತಮ್ಮ ಎಕ್ಸ್ ಖಾತೆಯಲ್ಲಿ ವೀಡಿಯೋ ಹಂಚಿಕೊಂಡಿದ್ದು, “ಕುದುರೆಗೆ ಬಣ್ಣ ಬಳಿಯಲಾಯಿತು ಮತ್ತು ಅದರ ದೇಹದ ಮೇಲೆ ಸ್ಟಿಕ್ಕರ್‌ಗಳನ್ನು ಹಾಕಲಾಯಿತು. ಕೆಳಗಿನ ವೀಡಿಯೊದಲ್ಲಿ, ಒಬ್ಬ ಮನುಷ್ಯನು ಕುದುರೆಯನ್ನು ಕೆಂಪು ಬಣ್ಣದಿಂದ ಚಿತ್ರಿಸುತ್ತಿರುವುದನ್ನು ನೀವು ನೋಡಬಹುದು. ಅಲ್ಲಿದ್ದ ಡೋಂಗ್ರಿ ಪೊಲೀಸರು ಕೂಡ ಖಚಿತಪಡಿಸಿದ್ದಾರೆ.” ಎಂದು ಟ್ವಿಟ್‌ ಮಾಡಿದ್ದಾರೆ. 

ಆದ್ದರಿಂದ, ಮೊಹರಂ ಮೆರವಣಿಗೆಯಲ್ಲಿ ಯುದ್ಧದಲ್ಲಿ ಗಾಯಗೊಂಡ ಕುದುರೆಯನ್ನು ಪ್ರತಿನಿಧಿಸಲು ಸಾಂಕೇತಿಕವಾಗಿ ಕುದುರೆಗೆ ಬಣ್ಣ ಮತ್ತು ಸ್ಟಿಕರ್‌ಗಳ ಅಂಟಿಸಿ ಮೆರವಣಿಗೆ ಮಾಡಲಾಗಿದೆಯೇ ಹೊರತು ನಿಜವಾಗಿಯೂ ಕುದುರೆಗೆ ಘಾಸಿಗೊಳಿಸಿಲ್ಲ.


ಇದನ್ನು ಓದಿ: ಕೊಲ್ಹಾಪುರದಲ್ಲಿ ಕಾಂಗ್ರೆಸ್‌ ಸಂಸದ ಮುಸ್ಲಿಂ ಮಹಿಳೆಯ ಬಳಿ ಕ್ಷಮೆ ಕೇಳಿದ್ದಾರೆ ಎಂಬುದು ಸುಳ್ಳು


ವೀಡಿಯೋ ನೋಡಿ: ಸ್ನಾನ ಮಾಡುವಾಗ ಮೊದಲು ತಲೆಗೆ ನೀರು ಹಾಕಿಕೊಂಡರೆ ಸ್ಟ್ರೋಕ್ ಹೊಡೆಯುವ ಸಾಧ್ಯತೆಯಿದೆ ಎಂಬುದಕ್ಕೆ ಆಧಾರಗಳಿಲ್ಲ


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

 

Leave a Reply

Your email address will not be published. Required fields are marked *