Fact Check | ಅಸ್ಸಾಂನ ಫುಲೆರ್ಟಾಲ್‌ನಲ್ಲಿರುವ ಪ್ರವಾಹ ಪರಿಹಾರ ಶಿಬಿರಕ್ಕೆ ರಾಹುಲ್ ಗಾಂಧಿ ಭೇಟಿ ನೀಡಿಲ್ಲ

ಸಾಮಾಜಿಕ ಜಾಲತಾಣದಲ್ಲಿ “ರಾಹುಲ್‌ ಗಾಂಧಿ ಅವರು ಅಸ್ಸಾಂನ ಫುಲೆರ್ಟಲ್‌ನಲ್ಲಿ ಪ್ರವಾಹ ಪರಿಹಾರ ಶಿಬಿರಕ್ಕೆ ಭೇಟಿ ನೀಡಿ ಸಂತ್ರಸ್ತ ಜನರ ಕುಂದುಕೊರತೆಗಳನ್ನು ಆಲಿಸಿದ್ದಾರೆ, ಜೊತೆಗೆ ಪ್ರವಾಹ ಸಂತ್ರಸ್ತರಿಗೆ ಧೈರ್ಯ ತುಂಬಿದ ಅವರು, “ನಾನು ನಿಮ್ಮೊಂದಿಗೆ ಇದ್ದೇನೆ” ಎಂದು ಹೇಳಿದ್ದಾರೆ” ಎಂದು ಹಲವು ಫೋಟೋಗಳೊಂದಿಗೆ ರಾಹುಲ್‌ ಗಾಂಧಿ ಅವರ ಭೇಟಿಯ ಕುರಿತು ಬರೆದುಕೊಳ್ಳಲಾಗುತ್ತಿದೆ. ಹಲವು ಸುದ್ದಿ ಮಾಧ್ಯಮಗಳು ಅದರಲ್ಲೂ ಪ್ರಮುಖವಾಗಿ ರಾಷ್ಟ್ರೀಯ ಸುದ್ದಿ ಮಾಧ್ಯಮಗಳು ಕೂಡ ಈ ಬಗ್ಗೆ ವರದಿ ಮಾಡಿವೆ.

ಇದೇ ರೀತಿ ANI ಕೂಡ ವರದಿ ಮಾಡಿದ್ದು, ಈ ಕುರಿತು ತನ್ನ ಎಕ್ಸ್‌  (ಟ್ವಿಟರ್‌) ಖಾತೆಯಲ್ಲಿ “ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಫುಲೆರ್ಟಲ್‌ನಲ್ಲಿನ ಪರಿಹಾರ ಶಿಬಿರದಲ್ಲಿ ಪ್ರವಾಹ ಪೀಡಿತ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ” ಎಂದು ಶೀರ್ಷಿಕೆ ನೀಡಿರುವುದು ಕಂಡು ಬಂದಿದೆ. ಅದೇ ರೀತಿಯಲ್ಲಿ ಪಿಟಿಐ ಕೂಡ ತನ್ನ ವರದಿಯಲ್ಲಿ ರಾಹುಲ್ ಗಾಂಧಿ ಅವರು ಅಸ್ಸಾಂ ಪ್ರವಾಹ ಸಂತ್ರಸ್ತರಿಗೆ ಧೈರ್ಯ ನೀಡಿದ್ದಾರೆ ಎಂದು ಟ್ವೀಟ್ ಅನ್ನು ಉಲ್ಲೇಖಿಸಿದ್ದಾರೆ ಆದರೆ ರಾಹುಲ್‌ ಗಾಂಧಿ ಅವರ ಸಾಮಾಜಿಕ ಜಾಲತಾಣದಲ್ಲಿ ಈ ವರದಿಗಳಲ್ಲಿ ಕಂಡು ಬಂದ ಫೋಟೋಗೆ ಬೇರೆಯದ್ದೇ ಟಿಪ್ಪಣಿಯನ್ನು ನೀಡಲಾಗಿದೆ. ಹಾಗಾಗಿ ಈ ವರದಿಗಳ ನೈಜತೆಯ ಕುರಿತು ಈ ಫ್ಯಾಕ್ಟ್‌ಚೆಕ್‌ನಲ್ಲಿ ಪರಿಶೀಲನೆ ನಡೆಸೋಣ

ಫ್ಯಾಕ್ಟ್‌ಚೆಕ್‌

ಸಾಮಾಜಿಕ ಜಾಲತಾಣ ಸೇರಿದ ಹಾಗೆ ಮಾಧ್ಯಮಗಳಲ್ಲಿ ಪ್ರಕಟಗೊಂಡ ವರದಿಯ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ X ಹ್ಯಾಂಡಲ್ ಅನ್ನು ಸಂಪೂರ್ಣವಾಗಿ ಪರಿಶೀಲನೆ ನಡೆಸಿದೆವು. ಈ ವೇಳೆ ನಮಗೆ ಮಾಧ್ಯಮ ವರದಿಗಳಲ್ಲಿ ಬಳಸಲಾದ ಫೋಟೋಗಳು ಕಂಡು ಬಂದಿವೆ. ಈ ಫೋಟೋಗಳಿಗೆ “ಶ್ರೀ ರಾಹುಲ್ ಗಾಂಧಿ ಅವರು ಅಸ್ಸಾಂನ ಪರಿಹಾರ ಶಿಬಿರದಲ್ಲಿ ಮಣಿಪುರ ಹಿಂಸಾಚಾರದ ನಿರಾಶ್ರಿತರನ್ನು ಭೇಟಿಯಾದರು.” ಎಂದು ಶೀರ್ಷಿಕೆ ನೀಡಿರುವುದು ಕಂಡು ಬಂದಿದೆ.

ಹೀಗಾಗಿ ರಾಹುಲ್‌ ಗಾಂಧಿ ಅವರು ಭೇಟಿಯಾಗಿದ್ದು ಪ್ರವಾಹ ಸಂತ್ರಸ್ಥರನ್ನಲ್ಲ ಬದಲಾಗಿ ಮಣಿಪುರದ ನಿರಾಶ್ರಿತರನ್ನು ಎಂಬುದು ತಿಳಿದು ಬಂದಿದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ರಾಹುಲ್ ಗಾಂಧಿ ಅವರ ಅಧಿಕೃತ ಇನ್‌ಸ್ಟಾಗ್ರಾಮ್ ಪುಟವನ್ನು ಪರಿಶೀಲನೆ ನಡೆಸಿದಾಗ ಇದಕ್ಕೆ ಸಂಬಂಧ ಪಟ್ಟ ವಿಡಿಯೋ ಕಂಡು ಬಂದಿದ್ದು ಅದರಲ್ಲಿ “ಪ್ರಿಯ ಮಣಿಪುರದ ಜನರೇ, ನಾನು ನಿಮ್ಮ ಸಹೋದರನಾಗಿ ನಿಮ್ಮ ಬಳಿಗೆ ಬರುತ್ತೇನೆ. ನಿಮ್ಮ ಜೀವನಕ್ಕೆ ಶಾಂತಿಯನ್ನು ಮರಳಿ ತರಲು ನಾನು ಎಲ್ಲವನ್ನೂ ಮಾಡುತ್ತೇನೆ. ಪ್ರೀತಿ ನಮ್ಮನ್ನು ಒಂದು ಪರಿಹಾರಕ್ಕೆ ಕರೆದೊಯ್ಯುತ್ತದೆ – ನನಗೆ ಖಚಿತವಾಗಿದೆ.” ಎಂದು ಬರೆದಿರುವುದು ಕಂಡು ಬಂದಿದೆ. 

ಇನ್ನೂ ಹೆಚ್ಚಿನ ಮಾಹಿತಿಗಾಗಿ ಹುಡುಕಾಟವನ್ನು ನಡೆಸಿದಾಗ ಅಸ್ಸಾಂನ ಫುಲೆರ್ಟಾಲ್‌ನಲ್ಲಿ ಯಾವುದೇ ಪ್ರವಾಹ ಪರಿಹಾರ ಶಿಬಿರವಿಲ್ಲ. ರಾಹುಲ್ ಗಾಂಧಿ ಇಲ್ಲಿನ ಎರಡು ಶಿಬಿರಗಳಿಗೆ ಭೇಟಿ ನೀಡಿದ್ದು, ಮಣಿಪುರ ಜಿಲ್ಲೆಯ ನಿರಾಶ್ರಿತರು ವಾಸಿಸುತ್ತಿದ್ದಾರೆ. ಲಖಿಪುರ್ ಬ್ಲಾಕ್‌ನಲ್ಲಿರುವ ಈ ಶಿಬಿರಗಳಲ್ಲಿ ಒಂದರಿಂದ ಅನೇಕ ಔಟ್‌ಲೆಟ್‌ಗಳು ಬಳಸಿರುವ ಫೋಟೋ ಇದ್ದು ಇವರೆಲ್ಲ ಮಣಿಪುರದ ನಿರಾಶ್ರಿತರಾಗಿದ್ದಾರೆ ಎಂದು ತಿಳಿದು ಬಂದಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕ್ಯಾಚಾರ್ ಜಿಲ್ಲೆಯ ಪರಿಹಾರ ಶಿಬಿರದಲ್ಲಿ ಅಸ್ಸಾಂ ಪ್ರವಾಹ ಸಂತ್ರಸ್ತರನ್ನು ಭೇಟಿ ಮಾಡಿದ್ದಾರೆ ಎಂಬ ವರದಿಗಳು ಸುಳ್ಳು. ಮಣಿಪುರ ಹಿಂಸಾಚಾರದ ಸಂತ್ರಸ್ತರ ಪರಿಹಾರ ಶಿಬಿರಕ್ಕೆ ಅವರು ಭೇಟಿ ನೀಡಿದ ಫೋಟೋಗಳನ್ನು ಮಾಧ್ಯಮಗಳು ತಪ್ಪಾಗಿ ಬಳಸಿಕೊಂಡಿವೆ ಎಂಬುದು ಹಲವು ಪರಿಶೀಲನೆಗಳನ್ನು ನಡೆಸಿದ ನಂತರ ಸಾಭೀತಾಗಿವೆ. ಹಾಗಾಗಿ ವೈರಲ್‌ ಸಂದೇಶಗಳನ್ನು ಶೇರ್‌ ಮಾಡುವ ಮುನ್ನ ಎಚ್ಚರ ವಹಿಸಿ.


ಇದನ್ನೂ ಓದಿ : Fact Check | ಬ್ರಿಟನ್‌ನ ಚುನಾವಣಾ ಫಲಿತಾಂಶದ ನಂತರ ಅಲ್ಲಿನ ಮುಸ್ಲಿಮರು ಟ್ರಾಫಿಕ್‌ ವಾರ್ಡನ್‌ಗೆ ಹಲ್ಲೆ ನಡೆಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *