Fact Check: ಮಲ್ಲಿಕಾರ್ಜುನ್ ಖರ್ಗೆಯವರು 50 ಸಾವಿರ ಕೋಟಿ ಆಕ್ರಮ ಆಸ್ತಿ ಹೊಂದಿದ್ದಾರೆ ಎಂಬುದಕ್ಕೆ ದಾಖಲೆಗಳಿಲ್ಲ

ಮಲ್ಲಿಕಾರ್ಜುನ್ ಖರ್ಗೆ

ನೆನ್ನೆ ಮತ್ತು ಮೊನ್ನೆಯಷ್ಟೇ ಸಂಸತ್ತಿನಲ್ಲಿ 2024ರ ಲೋಕಸಭಾ ಚುನಾವಣೆಯಲ್ಲಿ ಆಯ್ಕೆಯಾದ ಸಂಸದರು ಪ್ರಮಾಣ ವಚನ ಸ್ವೀಕರಿಸುವ ಕಾರ್ಯಕ್ರಮ ಜರುಗಿದೆ. ಆದರೆ ಸಂಸತ್ತಿನಲ್ಲಿ ಮೋದಿಜಿಯವರು ಖರ್ಗೆಯವರ ಆಸ್ತಿ ವಿವರಗಳನ್ನು ಬಯಲು ಮಾಡಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಈ ಹಿಂದೆಯೂ ಈ ಸಂದೇಶ ವೈರಲ್ ಆಗಿತ್ತು. ಈಗ ಮತ್ತೆ ಈ ಚರ್ಚೆ ಮುನ್ನಲೆಗೆ ಬಂದಿದೆ.

ವೈರಲ್ ಸಂದೇಶದಲ್ಲಿ ” ಖರ್ಗೆಯವರು ಸಂಸತ್ತಿನಲ್ಲಿ ದಲಿತರಿಗೆ ಕನಿಷ್ಠ ಒಂದು ಪ್ರತಿಶತ ಭೂಮಿಯನ್ನು ಮಂಜೂರು ಮಾಡಬೇಕೆಂದು ಒತ್ತಾಯಿಸಿದ್ದರು. ಆಗ ಪ್ರತಿಯಾಗಿ ಮೋದಿಯವರು ನೀವೇ ದಲಿತರಲ್ಲವೇ? ನಿಮ್ಮ ಆಸ್ತಿ ವಿವರಗಳನ್ನು ನಾನು ಹೇಳಲೆ ಎಂದು “ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್, ಕೆಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್! ರಾಮಯ್ಯ ಕಾಲೇಜಿನಲ್ಲಿ 25 ಕೋಟಿ ಮೌಲ್ಯದ ಕಟ್ಟಡ! ಹೀಗೆ ದಾಖಲೆ ಬಿಚ್ಚಿಟ್ಟರು ಎಂದು ಹಂಚಿಕೊಳ್ಳಲಾಗುತ್ತಿದೆ. ಮತ್ತು ಖರ್ಗೆಯವರು ಸಾವಿರಾರು ಕೋಟಿ ಅಕ್ರಮ ಆಸ್ತಿ ಹೊಂದಿದ್ದಾರೆ” ಎಂದು ಆರೋಪಿಸಲಾಗುತ್ತಿದೆ.

ಈ ಸಂದೇಶವನ್ನು ಅನೇಕ ಬಿಜೆಪಿ ಮತ್ತು ಬಲಪಂಥೀಯ ಬೆಂಬಲಿಗರು ಹಂಚಿಕೊಳ್ಳುತ್ತಿದ್ದಾರೆ. ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. ಕನ್ನಡದ ಸುವರ್ಣ ನ್ಯೂಸ್, ಒನ್ ಇಂಡಿಯಾ, ನಾಗ್‌ಪುರ್ ಟುಡೆ ಸಹ ಇದೇ ರೀತಿ ಮಲ್ಲಿಕಾರ್ಜುನ್ ಖರ್ಗೆಯವರ ಒಟ್ಟು ಆಸ್ತಿ ಮೊತ್ತ 50 ಸಾವಿರ ರೂಪಾಯಿ ಎಂದು ತಮ್ಮ ಲೇಖನಗಳಲ್ಲಿ ಯಾವುದೇ ದಾಖಲೆಗಳನ್ನು ನೀಡದೆ ವೈರಲ್ ಸಂದೇಶದ ಮಾಹಿತಿಗಳನ್ನೇ ಸುದ್ದಿಯಾಗಿ ವರದಿ ಮಾಡಿವೆ.

 

ಫ್ಯಾಕ್ಟ್‌ಚೆಕ್: ಈ ಸಂದೇಶ ಸಂಪೂರ್ಣ ಸುಳ್ಳಾಗಿದ್ದು, ಪ್ರಧಾನಿ ಮೋದಿಯವರು ಸಂಸತ್ತಿದಲ್ಲಿ ಇಂತಹ ಯಾವುದೇ ಹೇಳಿಕೆಗಳನ್ನು ನೀಡಿಲ್ಲ. ಈ ಕುರಿತು ಯಾವುದೇ ಮಾಧ್ಯಮಗಳು ವರದಿ ಮಾಡಿಲ್ಲ. ಸಂಸತ್ತಿನಲ್ಲಿ ನಡೆಯುವ ಎಲ್ಲಾ ಚರ್ಚೆಗಳು, ವಾಗ್ವಾದಗಳನ್ನು ಸಂಸದ್ ಟಿವಿ(ಹಿಂದೆ ಲೋಕಸಭಾ ಟಿವಿ)ಯಲ್ಲಿ ನೇರ ಪ್ರಸಾರವಿರುತ್ತದೆ ಮತ್ತು ದಾಖಲಿಸಿಕೊಳ್ಳಲಾಗುತ್ತದೆ, ಆದರೆ ಪ್ರಧಾನಿ ಮೋದಿಯವರು ಮಲ್ಲಿಕಾರ್ಜುನ್ ಖರ್ಗೆಯವರ ಆಸ್ತಿಯ ಕುರಿತು ಚರ್ಚಿಸಿರುವ ಯಾವುದೇ ವೀಡಿಯೋ ದಾಖಲೆಗಳು ಲಭ್ಯವಿಲ್ಲ.

ಅಸಲಿಗೆ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಖರ್ಗೆಯವರು ಸಲ್ಲಿಸಿದ ಅಫಿಡವಿಟ್‌ ಮತ್ತು ಚುನಾವಣಾ ಆಯೋಗದ ಅಧಿಕೃತ ದಾಖಲೆಯಂತೆ ಮಲ್ಲಿಕಾರ್ಜುನ ಖರ್ಗೆಯವರ ಒಟ್ಟು ಆಸ್ತಿ ಮೊತ್ತ 15 ಕೋಟಿ ರೂ ಮಾತ್ರ.

ಇನ್ನು ಖರ್ಗೆಯವರ ಅಸಲಿ ಆಸ್ತಿ ಎಷ್ಟು ಎಂದು ಗೂಗಲ್‌ನಲ್ಲಿ ಹುಡುಕಿದಾಗ ಅವರು 2020ರಲ್ಲಿ ರಾಜ್ಯಸಭಾ ಸದಸ್ಯತ್ವಕ್ಕೆ ನಾಮಪತ್ರ ಸಲ್ಲಿಸಿದಾಗ ತಮ್ಮ ಅಫಿಡವಿಟ್‌ನಲ್ಲಿ, ತಮ್ಮ ಕುಟುಂಬದ ಆಸ್ತಿ ₹ 20.12 ಕೋಟಿ ಮತ್ತು ಸಾಲ ₹ 23.75 ಲಕ್ಷ ಎಂದು ಖರ್ಗೆ ಹೇಳಿದ್ದಾರೆ. ಅದನ್ನು ಇಲ್ಲಿ ನೋಡಬಹುದು.

ಇನ್ನೂ ಮಲ್ಲಿಕಾರ್ಜುನ್ ಖರ್ಗೆಯವರಿಗೆ ವೈರಲ್ ಸಂದೇಶದಲ್ಲಿರುವಂತೆ “ಬೆಂಗಳೂರಿನ ಬನ್ನೇರುಘಟ್ಟ ಪ್ರದೇಶದಲ್ಲಿ 500 ಕೋಟಿ ರೂಪಾಯಿ ವೆಚ್ಚದ ವಾಣಿಜ್ಯ ಸಂಕೀರ್ಣ, ಚಿಕ್ಕಮಗಳೂರಿನಲ್ಲಿ 300 ಎಕರೆ ಕಾಫಿ ಎಸ್ಟೇಟ್, ಕೆಂಗೇರಿಯಲ್ಲಿ 40 ಕೋಟಿಯ ಫಾರ್ಮ್ ಹೌಸ್! ರಾಮಯ್ಯ ಕಾಲೇಜಿನಲ್ಲಿ 25 ಕೋಟಿ ಮೌಲ್ಯದ ಕಟ್ಟಡ” ಹೊಂದಿರುವ ಕುರಿತು ಹುಡುಕಿದಾಗ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ಆದ್ದರಿಂದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರ ತೇಜೋವಧೆ ಮಾಡಲು, ಅವರ ವರ್ಚಸ್ಸಿಗೆ ಧಕ್ಕೆ ತರಲು ಅವರ ವಿರೋಧಿಗಳು ಕೂತಲ್ಲಿಯೇ ಸೃಷ್ಟಿಸಿದ ಸುಳ್ಳು ಸುದ್ದಿ ಇದಾಗಿದೆ. ಯಾವ ದಾಖಲೆಯೂ ಇಲ್ಲದೆ ಹರಡುವ ಇಂತಹ ಸುಳ್ಳು ಸುದ್ದಿಗಳ ಕುರಿತು ಎಚ್ಚರದಿಂದಿರಿ ಮತ್ತು ಅಂತಹ ಸಂದೇಶಗಳನ್ನು ನಂಬದೆ ತಿರಸ್ಕರಿಸಿ.


ಇದನ್ನು ಓದಿ: ಕಾಂಗ್ರೆಸ್‌ ನಿಮ್ಮ ಹಣ ದೋಚಿ ಮುಸ್ಲಿಮರಿಗೆ ಕೊಡುತ್ತದೆ ಎಂದು ಖರ್ಗೆ ಹೇಳಿಲ್ಲ. ಇದು ಎಡಿಟೆಡ್‌ ವಿಡಿಯೋ


ವೀಡಿಯೋ ನೋಡಿ: 2018ರಲ್ಲಿ ಸಿದ್ದರಾಮಯ್ಯನವರು 8 ಸಾವಿರ ಸರ್ಕಾರಿ ಶಾಲೆಗಳನ್ನು ಮುಚ್ಚಿಸಿದ್ದಾರೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ

Leave a Reply

Your email address will not be published. Required fields are marked *