Fact Check | ಬಿಜೆಪಿ ಮಾರ್ಗದರ್ಶಿ ಮಂಡಳಿಗೆ ಇತ್ತೀಚೆಗೆ ಮೋದಿ ಹೆಸರು ಸೇರಿಸಿದೆ ಎಂಬುದು ಸುಳ್ಳು

ಬಿಜೆಪಿ ತನ್ನ ವೆಬ್‌ಸೈಟ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಹೆಸರನ್ನು ‘ಮಾರ್ಗದರ್ಶಕ್ ಮಂಡಲ್’ ವರ್ಗದ ಅಡಿಯಲ್ಲಿ ಪಟ್ಟಿಮಾಡಿರುವ ಸ್ಕ್ರೀನ್‌ಶಾಟ್ ಅನ್ನು ಈಗ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದೆ. ಈ ಸ್ಕ್ರೀನ್‌ಶಾಟ್‌ ಜೊತೆಗೆ “2024 ರ ಲೋಕಸಭಾ ಚುನಾವಣೆಯ ನಂತರ ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಹೆಸರನ್ನು ಸೇರಿಸಲಾಗಿದೆ. ಅವರನ್ನು ಈಗ ಬಿಜೆಪಿಯಿಂದ ನಿಧಾನವಾಗಿ ದೂರ ಇಡಲಾಗುತ್ತಿದೆ.” ಎಂದು ಬರಹಗಳನ್ನು ಕೂಡ ಹಂಚಿಕೊಳ್ಳಲಾಗುತ್ತಿದೆ. ಕೇರಳ ಕಾಂಗ್ರೆಸ್‌ ಕೂಡ ಇದೇ ರೀತಿಯಾದ ಪೋಸ್ಟ್‌ ಅನ್ನು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದೆ.

ಇದನ್ನೇ ನಿಜವೆಂದು ನಂಬಿರುವ ಹಲವರು ವೈರಲ್‌ ಸ್ಕ್ರೀನ್‌ಶಾಟ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಕೂಡ ಹಂಚಿಕೊಳ್ಳುತ್ತಿದ್ದಾರೆ. ಅದರಲ್ಲೂ “ಬಿಜೆಪಿ ಇಷ್ಟು ಬೇಗ ಈ ರೀತಿಯ ನಿಲುವುಗಳನ್ನು ತೆಗೆದುಕೊಳ್ಳುವ ಅವಶ್ಯಕತೆ ಇರಲಿಲ್ಲ. ಪ್ರಧಾನಿಯಾಗಿ ನರೇಂದ್ರ ಮೋದಿ ಅವರೇ ಮುಂದುವರೆಯಬೇಕು.” ಎಂದು ಕೆಲವರು ಈ ಪೋಸ್ಟ್‌ಗಳಿಗೆ ಕಮೆಂಟ್‌ ಕೂಡ ಮಾಡುತ್ತಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ಉಲ್ಲೇಖಿಸಿದ ಅಂಶ ನಿಜವೇ ಎಂಬುದನ್ನು ಈ ಅಂಕಣದಲ್ಲಿ ಪರಿಶೀಲನೆ ನಡೆಸೋಣ.

ಫ್ಯಾಕ್ಟ್‌ಚೆಕ್‌

ಈ ಕುರಿತು ಪರಿಶೀಲನೆ ನಡೆಸಲು ಕನ್ನಡ ಫ್ಯಾಕ್ಟ್‌ಚೆಕ್‌ ತಂಡ ಮುಂದಾಯಿತು. ಇದಕ್ಕಾಗಿ ವೈರಲ್‌ ಪೋಸ್ಟ್‌ಗೆ ಸಂಬಂಧಿಸಿದಂತೆ ಕೆಲವೊಂದು ಕೀ ವರ್ಡ್ಸ್‌ಗಳನ್ನು ಬಳಸಿ ನಾವು ಅಂತರ್ಜಾಲದಲ್ಲಿ ಹುಡುಕಾಟವನ್ನು ನಡೆಸಿದೆವು. ಈ ವೇಳೆ ಕೆಲವೊಂದು ಪತ್ರಿಕಾ ವರದಿಗಳು ಕೂಡ ಪತ್ತೆಯಾಗಿವೆ. ಆ ವರದಿಯ ಪ್ರಕಾರ ಆಗಸ್ಟ್ 2014 ರಿಂದ ಬಿಜೆಪಿಯ ಮಾರ್ಗದರ್ಶಕ್ ಮಂಡಲದ ಅಡಿಯಲ್ಲಿ ನರೇಂದ್ರ ಮೋದಿ ಮತ್ತು ರಾಜನಾಥ್ ಸಿಂಗ್ ಅವರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ ಎಂಬುದು ತಿಳಿದು ಬಂದಿದೆ. ಈ ಕುರಿತು ಇಂಡಿಯಾ ಟುಡೆ ಫ್ಲ್ಯಾಷ್‌ ತನ್ನ ಎಕ್ಸ್‌ ಖಾತೆಯಲ್ಲೂ ಪೋಸ್ಟ್‌ ಮಾಡಿದೆ.

ಇನ್ನು ದ ಎಕಾನಾಮಿಕ್ಸ್‌ ಟೈಮ್ಸ್‌ 26, ಆಗಸ್ಟ್ 2014 ರಂದು ಮಾಡಿದ್ದ ವರದಿಯ ಪ್ರಕಾರ, ಬಿಜೆಪಿಯ ಹಿರಿಯ ನಾಯಕರಾದ ಎಲ್‌.ಕೆ ಅಡ್ವಾಣಿ ಮತ್ತು ಎಂ.ಎಂ ಜೋಶಿ ಅವರ ಹೆಸರನ್ನು ಸಂಸದೀಯ ಮಂಡಳಿಯಿಂದ ಕೈಬಿಡಲಾಯಿತು. ಆದರೆ ಹೊಸ ಸಂಸ್ಥೆಯಾದ ‘ಮಾರ್ಗದರ್ಶಕ್ ಮಂಡಲ್’ಗೆ ಸೇರಿಸಲಾಯಿತು. ‘ಮಾರ್ಗದರ್ಶಕ್ ಮಂಡಲ್’ (ಮಾರ್ಗದರ್ಶಕ ಸಂಸ್ಥೆ)ನಲ್ಲಿ ಅಟಲ್ ಬಿಹಾರಿ ವಾಜಪೇಯಿ, ನರೇಂದ್ರ ಮೋದಿ, ಎಲ್‌ಕೆ ಅಡ್ವಾಣಿ, ಎಂಎಂ ಜೋಶಿ ಮತ್ತು ರಾಜನಾಥ್ ಸಿಂಗ್ ಅವರನ್ನು ಒಳಗೊಂಡಿರುವ ಐದು ಸದಸ್ಯರ ಸಂಸ್ಥೆಯಾಗಿದೆ ಎಂಬುದು ಈ ವರದಿಯಿಂದ ಖಚಿತವಾಗಿದೆ.

ಒಟ್ಟಾರೆಯಾಗಿ ಈ ಎಲ್ಲಾ ಅಂಶಗಳನ್ನು ಗಮನಿಸಿದಾಗ, ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರ ಹೆಸರನ್ನು ಮಾರ್ಗದರ್ಶಕ್‌ ಮಂಡಲ್‌ಗೆ ಇತ್ತೀಚೆಗೆ ಸೇರಿಸಲಾಗಿದೆ ಎಂಬುದು ಸಂಪೂರ್ಣವಾಗಿ ಸುಳ್ಳಾಗಿದೆ. ಮತ್ತು ಅವರ ಹೆಸರು 2014ರಿಂದಲೂ ಮಾರ್ಗದರ್ಶಲ್‌ ಮಂಡಲ್‌ನಲ್ಲಿ ಇದೆ ಎಂಬುದು ಖಚಿತವಾಗಿದೆ. ಹಾಗಾಗಿ ಇಂತಹ ಸುದ್ದಿಗಳನ್ನು ನಂಬುವ ಮೊದಲು ಒಮ್ಮೆ ಪರಿಶೀಲಿಸಿಕೊಳ್ಳಿ.


ಇದನ್ನೂ ಓದಿ : Fact Check | ಉತ್ತರ ಪ್ರದೇಶದಲ್ಲಿ ಕೋಮು ದ್ವೇಷಕ್ಕೆ ಮುಸ್ಲಿಂ ಮುಖಂಡರ ಹತ್ಯೆಯಾಗುತ್ತಿದೆ ಎಂಬುದು ಸುಳ್ಳು


ನಿಮಗೆ ಯಾವುದೇ ಸುದ್ದಿ, ಫೋಟೋ, ವಿಡಿಯೋ ಬಗ್ಗೆ ಸಂದೇಹ ಬಂದರೆ ಕನ್ನಡ ಫ್ಯಾಕ್ಟ್‌ಚೆಕ್ ವಾಟ್ಸಾಪ್ ನಂಬರ್‌ಗೆ 7892502991 ಕಳಿಸಿ. ಸತ್ಯ ತಿಳಿಸುತ್ತೇವೆ.

Leave a Reply

Your email address will not be published. Required fields are marked *